ತಾನ್ಹಾವ್ಲ ಪ್ರಮಾಣ ವಚನ
ಐಜ್ವಾಲ್ (ಪಿಟಿಐ): ಮಿಜೋರಾಂನಲ್ಲಿ ಕಾಂಗ್ರೆಸ್ನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ ಲಾಲ್ ತಾನ್ಹಾವ್ಲ ಅವರು ಸತತ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯಪಾಲ ವಕ್ಕೋಂ ಪುರುಷೋತ್ತಮ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ 11 ಸಚಿವರು ಕೂಡ ಸಂಪುಟಕ್ಕೆ ಸೇರ್ಪಡೆಯಾದರು. ತಾನ್ಹಾವ್ಲ ಅವರು ಈವರೆಗೆ ಒಟ್ಟು ಐದು ಬಾರಿ ಮುಖ್ಯಮಂತ್ರಿ ಹುದ್ದೆಗೆ ಏರಿದಂತಾಗಿದೆ.
ಸೋಮವಾರ ಲಾಲು ಬಿಡುಗಡೆ ಸಾಧ್ಯತೆ
ರಾಂಚಿ (ಪಿಟಿಐ): ಮೇವು ಹಗರಣದಲ್ಲಿ ಜೈಲು ಸೇರಿರುವ ರಾಷ್ಟ್ರೀಯ ಜನತಾದಳ (ಆರ್ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೃತಿಕ್–ಸೂಸಾನ್ ವಿಚ್ಛೇದನ
ಮುಂಬೈ(ಪಿಟಿಐ): ಬಾಲಿವುಡ್ ನಟ ಹೃತಿಕ್ ರೋಷನ್ ಅವರು ತಮ್ಮ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯ ಹಾಡಲು ಮುಂದಾಗಿದ್ದಾರೆ. ಈ ಮಧ್ಯೆಯೂ, ‘ಪತ್ನಿ ಸೂಸಾನ್ ಅವರೇ ನನ್ನ ಜೀವನದ ಪ್ರೀತಿ’ ಎಂದು ಹೇಳಿಕೊಂಡಿದ್ದಾರೆ.
‘ಇನ್ನು ಮುಂದೆ ನನ್ನ ಮತ್ತು ಸೂಸಾನ್ ದಾರಿ ಬೇರೆ ಬೇರೆ’ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ತಲ್ಲಣ ಮೂಡಿಸಿದ್ದ ಹೃತಿಕ್, ‘ನನ್ನ ಪ್ರೀತಿಗೆ ನಾನು ನೀಡುತ್ತಿರುವ ಅತಿದೊಡ್ಡ ಕೊಡುಗೆ ಇದು. ಸೂಸಾನ್ ಇಂದು ಮತ್ತು ಎಂದೆಂದಿಗೂ ನನ್ನ ಜೀವನದ ಮತ್ತು ಅದರ ನಂತರದ ಪ್ರೀತಿ. ನನ್ನ ಪ್ರೀತಿ ಇಲ್ಲದೆಯೇ ಅವಳು ಸಂತೋಷವಾಗಿ ಇರುತ್ತಾಳೆ ಎಂದಾದರೆ ಅದಕ್ಕೆ ನಾನು ಯಾವುದೇ ಕರಾರುವಿಲ್ಲದೆ ಸಹಕರಿಸುತ್ತೇನೆ’ ಎಂದು ಹೇಳಿದ್ದಾರೆ.
‘ಸೂಸಾನ್ ಅವರೇ ವಿಚ್ಛೇದನಕ್ಕೆ ಮುಂದಾಗಿದ್ದು ಅವರ ಸಂತೋಷಕ್ಕಾಗಿ ಬೇರೆ ಇರಲು ನಿರ್ಧರಿಸಿದ್ದೇನೆ’ ಎಂದು ಹೃತಿಕ್ ಹೇಳಿದ್ದಾರೆ.
ಮಗಳನ್ನೇ ಪಣಕ್ಕಿಟ್ಟ ಅಪ್ಪ!
ಮಾಲ್ಡಾ (ಪಿಟಿಐ): ಜೂಜಿನಲ್ಲಿ ತನ್ನ 13 ವರ್ಷದ ಮಗಳನ್ನು ಪಣವೊಡ್ಡಿ ಸೋತ ವ್ಯಕ್ತಿಯು ಮಗಳನ್ನು ಗೆದ್ದಾತನಿಗೇ ಕೊಟ್ಟು ಮದುವೆ ಮಾಡಿಕೊಡಲು ನಿರ್ಧರಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಾಲ್ಡಾ ಜಿಲ್ಲೆಯ ಕೃಷ್ಣಾಪುರ ಬುರಿತಾಲಾ ಎಂಬ ಗ್ರಾಮದ ಜೂಜುಕೋರನೇ ಇದಕ್ಕೆ ಮುಂದಾಗಿರುವಾತ.
ಡಿಸೆಂಬರ್ 1ರಂದು ನೆರೆಮನೆಯ ಯುವಕನೊಂದಿಗೆ ಜೂಜಿಗೆ ಕೂತ ಈತ ಎಲ್ಲವನ್ನೂ ಕಳೆದುಕೊಂಡ. ಆದರೂ ಎದ್ದೇಳಲು ಒಲ್ಲದ ಆತ ಕಡೆಗೆ ತನ್ನ ಮಗಳನ್ನೇ ಪಣಕ್ಕಿಟ್ಟ ಆಗಲೂ ಸೋತ. ಈಗ ಜ.22 ರಂದು ಮಗಳನ್ನು ಆ ಯುವಕನಿಗೇ ಮದುವೆ ಮಾಡಿಕೊಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎರಡೂ ಕುಟುಂಬಗಳು ತಯಾರಿಯಲ್ಲಿ ತೊಡಗಿವೆ. ಡಿ.9ರಂದು ನಿಶ್ಚಿತಾರ್ಥವೂ ಮುಗಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.