200 ವಿದೇಶಿ ಕಾರ್ಮಿಕರಿಗೆ ಎಚ್ಚರಿಕೆ
ಸಿಂಗಪುರ (ಪಿಟಿಐ): ಲಿಟ್ಲ್ ಇಂಡಿಯಾ ಪ್ರದೇಶ ಗಲಭೆ ಪ್ರಕರಣದಲ್ಲಿ ಪಾಲ್ಗೊಂಡಿದ್ದರು ಎನ್ನುವ ಆರೋಪದ ಮೇಲೆ ಇಲ್ಲಿ ಕೆಲಸ ಮಾಡುತ್ತಿರುವ ಭಾರತೀಯರೂ ಸೇರಿದಂತೆ ಸುಮಾರು 200 ವಿದೇಶಿ ಕಾರ್ಮಿಕರಿಗೆ ಸಿಂಗಪುರ ಪೊಲೀಸರು ಭಾನುವಾರ ಠಾಣೆಗೆ ಕರೆದು ಎಚ್ಚರಿಕೆ ನೀಡಿದ್ದಾರೆ.
ನೈರೋಬಿ: ಹಳಿ ತಪ್ಪಿದ ರೈಲು
ನೈರೋಬಿ (ಎಎಫ್ಪಿ): ಕೊಳೆಗೇರಿ ಪ್ರದೇಶದಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿ ಬಿದ್ದ ಪರಿಣಾಮ ಕನಿಷ್ಠ ಆರು ಜನ ಗಾಯಗೊಂಡ ಘಟನೆ ಭಾನುವಾರ ಇಲ್ಲಿ ನಡೆದಿದೆ.
ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ಮೈಖೆಲ್ ಕಮೂ ಹೇಳಿದ್ದಾರೆ.
ವಿಮಾನ ಅಪಘಾತ: ಪೈಲಟ್ ಕೃತ್ಯ
ಲಂಡನ್ (ಐಎಎನ್ಎಸ್): ನಮೀಬಿಯಾದಲ್ಲಿ ಕಳೆದ ತಿಂಗಳು ದುರಂತಕ್ಕೀಡಾಗಿದ್ದ ಮೊಜಾಂಬಿಕ್ ಏರ್ಲೈನ್ಸ್ನ ವಿಮಾನವನ್ನು ಪೈಲಟ್ ಉದ್ದೇಶಪೂರ್ವಕವಾಗಿ ಅಪಘಾತಕ್ಕೀಡುಮಾಡಿದ್ದ ಎಂದು ಬಿಬಿಸಿ ವರದಿ ಮಾಡಿದೆ.
ಅಂಗೋಲಾಕ್ಕೆ ತೆರಳುತ್ತಿದ್ದ ವಿಮಾನ ನವೆಂಬರ್ 30ರಂದು ನಮೀಬಿಯಾದಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನ-ದಲ್ಲಿದ್ದ ಎಲ್ಲಾ 33 ಜನ ಮೃತಪಟ್ಟಿದ್ದರು.
‘ಬಾಹ್ಯಾಕಾಶದಲ್ಲಿ ಆಕರಕೋಶ ಬೆಳೆ’
ವಾಷಿಂಗ್ಟನ್ (ಪಿಟಿಐ): ಬಾಹ್ಯಾಕಾಶದಲ್ಲಿ ಮಾನವನ ಆಕರಕೋಶಗಳನ್ನು ಬೆಳೆಸುವ ಪ್ರಯತ್ನಕ್ಕೆ ಅಮೆರಿಕ ವಿಜ್ಞಾನಿಗಳು ಮುಂದಾಗಿದ್ದಾರೆ.
ಆಕರಕೋಶಗಳನ್ನು ಭೂಮಿಗಿಂತಲೂ ಹೆಚ್ಚು ವೇಗದಲ್ಲಿ ಬಾಹ್ಯಾಕಾಶದಲ್ಲಿ ಬೆಳೆಸಬಹುದೇ ಎಂಬುದನ್ನು ತಿಳಿಯುವುದಕ್ಕಾಗಿ ಅಮೆರಿಕವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಮಾನವ ಆಕರಕೋಶಗಳನ್ನು ಕಳುಹಿಸಲಿದೆ.
ಅಂತರಿಕ್ಷ ಉಡುಪು ದೋಷ
ವಾಷಿಂಗ್ಟನ್ (ಎಎಫ್ಪಿ): ಗಗನಯಾತ್ರಿಯೊಬ್ಬರ ಉಡುಪಿನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾವು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಕಾರ್ಯ ಮುಂದೂಡಿದೆ.
ಐಎಸ್ಎಸ್ನ ದುರಸ್ತಿ ಕಾರ್ಯಕ್ಕಾಗಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದ ಹಿರಿಯ ಗಗನಯಾತ್ರಿ ರಿಕ್ಮಾಸ್ಟ್ರಚಿನೊ ಅವರು ಧರಿಸಿದ್ದ ಬಾಹ್ಯಾಕಾಶ ದಿರಿಸಿನ ಶೀತಲೀಕರಣ ಘಟಕದಲ್ಲಿ ದೋಷ ಕಂಡು ಬಂದ ಕಾರಣ 5.5 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ನಡೆಸಿ ಐಎಸ್ಎಸ್ಗೆ ಹಿಂದಿರುಗಿದರು ಎಂದು ನಾಸಾ ಹೇಳಿದೆ.
ಭಾರತೀಯ ವೈದ್ಯನ ಶವ ಬ್ರಿಟನ್ಗೆ
ಲಂಡನ್ (ಪಿಟಿಐ): ಸಿರಿಯಾ ಜೈಲಿನಲ್ಲಿ ಶಂಕಾಸ್ಪದ ರೀತಿಯಲ್ಲಿ ಇದೇ 16ರಂದು ಸಾವನ್ನಪ್ಪಿದ್ದ ಭಾರತ ಮೂಲದ ವೈದ್ಯ ಷಾ ಅಬ್ಬಾಸ್ ಖಾನ್ (32) ಅವರ ಶವವನ್ನು ಬ್ರಿಟನ್ಗೆ ರವಾನಿಸಲಾಗಿದೆ. ದಕ್ಷಿಣ ಲಂಡನ್ ನಿವಾಸಿಯಾದ ಅವರು ಮೂಳೆ ಶಸ್ತ್ರಚಿಕಿತ್ಸಕರಾಗಿದ್ದರು.
ಶವವನ್ನು ಶನಿವಾರವೇ ಲೆಬನಾನ್ಗೆ ಕಳುಹಿಸಲಾಗಿದ್ದು, ಖಾನ್ ಅವರ ತಾಯಿ ಫಾತಿಮಾ ಮತ್ತು ಸೋದರ ಅಫ್ರೋಜ್ ಅವರು ಅದನ್ನು ಸ್ವೀಕರಿಸಿದ್ದಾರೆ. ಅವರು ಶವವನ್ನು ಬ್ರಿಟನ್ಗೆ ತೆಗೆದುಕೊಂಡು ಹೋಗಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.