ಕೊಪ್ಪಳ: `ಪ್ರಸಕ್ತ ಉಪಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿ ಗೆದ್ದಿದ್ದೇ ಆದರೆ ಈ ಕ್ಷೇತ್ರ ಮೊದಲು ಹೇಗಿತ್ತೋ ಅದೇ ಸ್ಥಿತಿ ಮುಂದುವರಿಯಲಿದೆ. ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಗೆದ್ದರೆ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ ಎಂಬ ಅಂಶವನ್ನು ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಿ ಕೊಡಬೇಕು~.
-ಇದು ಇಂಧನ ಸಚಿವ ಶೋಭಾ ಕರಂದ್ಲಾಜೆ ಪಕ್ಷದ ಕಾರ್ಯಕರ್ತರಿಗೆ ಹೇಳಿದ ಕಿವಿಮಾತು.
ಅವರು ನಗರದಲ್ಲಿ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಂಗಣ್ಣ ಕರಡಿ ಬಿಜೆಪಿಗೆ ಸೇರಿದಾಗಿನಿಂದ 250 ಕೋಟಿ ರೂಪಾಯಿಗೂ ಅಧಿಕ ಅನುದಾನ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆಯಾಗಿದೆ.
ಈ ಉಪಚುನಾವಣೆಯಲ್ಲಿ ಸಂಗಣ್ಣ ಕರಡಿ ಗೆದ್ದರೆ ಇನ್ನಷ್ಟೂ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತವೆ ಎಂಬ ಅಂಶವನ್ನು ಮತದಾರರಿಗೆ ಹೇಳುವ ಜವಾಬ್ದಾರಿ ಕಾರ್ಯಕರ್ತರದು ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ವೈದ್ಯಕೀಯ ಸಚಿವ ಎಸ್.ಎ.ರಾಮದಾಸ್, ಈ ಉಪಚುನಾವಣೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಲಿಗೆ ಜೀನ್ಮರಣದ ಪ್ರಶ್ನೆಯಾಗಿದೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಕ್ಷೇತ್ರದಲ್ಲಿ ಜಾತಿ-ಧರ್ಮಗಳ ಆಧಾರದ ಮೇಲೆ ಮತ ಯಾಚಿಸುತ್ತಿವೆ. ಜನರನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ ಎಂದು ದೂರಿದರು.
ಸೆ. 25 ಮತ್ತು 26ರಂದು ಕಷ್ಟಪಟ್ಟು ದುಡಿದು ಬಿಡಿ ಸಾಕು. ಮುಂದಿನ ದಿನಮಾನಗಳಲ್ಲಿ ನಿಮ್ಮ ಸಂಗಣ್ಣ ಕರಡಿ ನಿಮ್ಮ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಸಂಸದ ಶಿವರಾಮಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ವಸತಿ ಸಚಿವ ವಿ.ಸೋಮಣ್ಣ, ಕೃಷಿ ಸಚಿವ ಉಮೇಶ ಕತ್ತಿ ಮತ್ತಿತರರು ವೇದಿಕೆ ಮೇಲಿದ್ದರು.