ರಾಣೆಬೆನ್ನೂರು: ‘ನಿವೃತ್ತ ಅಧಿಕಾರಿಗಳು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಾಂತ ರೀತಿಯಿಂದ ಹೋರಾಟ ಮಾಡಿ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು. ಯಾವುದೇ ಸಭೆ ಕರೆದಾಗ ಸದಸ್ಯರು ತಪ್ಪದೇ ಹಾಜರಾಗಿ ಸಲಹೆ ಸೂಚನೆ ನೀಡಬೇಕು’ ಎಂದು ಬಿಎಸ್ಎನ್ಎಲ್ ಮತ್ತು ಡಾಟ್ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಚಿಮ್ಮಲಗಿ ಹೇಳಿದರು.
ನಗರದ ಪ್ರಾಥಮಿಕ ಶಾಲಾ ಶಿಕ್ಷಕ– ಶಿಕ್ಷಕರಿಯರ ಪತ್ತಿನ ಸಹಕಾರಿ ಸಂಘದ ಸಭಾಸಭವನದಲ್ಲಿ ಸೋಮವಾರ ನಡೆದ ಅಖಿಲ ಭಾರತ ಬಿಎಸ್ಎನ್ಎಲ್ ಮತ್ತು ಡಾಟ್ ನಿವೃತ್ತರ ಸಂಘ ಏರ್ಪಡಿಸಿದ್ದ 6ನೇ ವಲಯ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
’ಸಂಘಟನೆಯಲ್ಲಿ ಶಕ್ತಿಯಿದೆ. ಸಂಘಟನೆ ಇಲ್ಲದಿದ್ದರೆ ನಮ್ಮನ್ನು ಯಾರು ಮಾತನಾಡಿಸುವುದಿಲ್ಲ. ಸಂಘಟನಾತ್ಮಕವಾಗಿ ಹೋರಾಟ ಮಾಡಿ ಸರ್ಕಾರದ ಕಣ್ಣು ತೆರೆಸಬೇಕು. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಹೋರಾಟ ಅನಿವಾರ್ಯ’ ಎಂದು ಹೇಳಿದರು.
ನಿವೃತ್ತ ಅಂಚೆ ಕಚೇರಿ ವ್ಯವಸ್ಥಾಪಕ ವಿ.ಆರ್.ಜೋಶಿ ಮಾತನಾಡಿ, ‘ನಿವೃತ್ತರಾದರೂ ಸಮಾಜ ಸೇವೆ ಮಾಡಬೇಕು, ನಿವೃತ್ತರಿಗೆ ಸವಲತ್ತುಗಳನ್ನು ನೀಡಲು ಕೇಂದ್ರ ಸರ್ಕಾರಕ್ಕೆ ನಕಾರಾತ್ಮ ಧೋರಣೆಯಿದೆ. ಸಂಘಟಿತ ಹೋರಾಟದಿಂದ ಮಾತ್ರ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ’ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿಗಳ ನಿವೃತ್ತಿ ವೇತನ, ಸಮಸ್ಯೆಗಳ ಬಗ್ಗೆ ಮತ್ತು ಸರ್ಕಾರದ ಸೌಲತ್ತುಗಳನ್ನು ಪಡೆಯುವ ಬಗ್ಗೆ ಚರ್ಚಿಸಲಾಯಿತು.
ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ಹಾಸನ, ಬಾಗಲಕೋಟ, ಬಿಜಾಪುರ, ಹುಬ್ಬಳ್ಳಿ, ಹರಿಹರ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬಿಎಸ್ಎನ್ಎಲ್ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಬಿ.ದುರ್ಗದ ಮಾತನಾಡಿದರು. ಜಿ.ಜಿ. ಪಾಟೀಲ, ಕೆ.ಜಿ. ದೇಶಪಾಂಡೆ, ಆರ್.ಬಿ. ಪಾಟೀಲ, ಪಿ.ಆರ್. ಹೊಸಮನಿ, ಕಲಘಟಗಿ, ಎಚ್.ಬಿ. ನಾಯಕ, ವಿ.ಎಸ್. ಬೆಳ್ಳೂಡಿ, ಎಸ್.ಕೆ. ಮಠದ, ಎನ್.ಆರ್. ಮಠದ, ಎಲ್.ಎಂ. ಕಲ್ಲನಗೌಡ್ರ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.