ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾಗಿ, ಸಮುದಾಯ ಕಟ್ಟಿ: ಸಲಹೆ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸಂಘಟಿತರಾದಾಗ ಮಾತ್ರ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನೇಕಾರ ಬಾಂಧವರು ತಮ್ಮ, ಭಾಷೆ ಉಪಜಾತಿಗಳನ್ನು ಮೀರಿ ಒಂದಾಗುವ ಅಗತ್ಯವಿದೆ ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದಯನಂದಪುರಿಸ್ವಾಮೀಜಿ ಹೇಳಿದರು.

ಫೆಬ್ರವರಿ 3 ರಿಂದ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆಯಲಿರುವ ಅಖಿಲ ಭಾರತ ದೇವಾಂಗ ಮಹಾ ಸಮ್ಮೇಳನದ ಅಂಗವಾಗಿ ಇಲ್ಲಿನ ದೇವಾಂಗ ಮಂಡಲಿ ನೇತೃತ್ವದಲ್ಲಿ ನಗರದ ದೇವಲ ಮಹರ್ಷಿ ವಿದ್ಯಾನಿಕೇತನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಂಘಟನಾತ್ಮಕವಾಗಿ ದೇವಾಂಗ ಸಮುದಾಯ ಒಂದೆಡೆ ಸೇರುತ್ತಿರುವುದು ಸಂತಸವಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಅಖಿಲ ಭಾರತ ದೇವಾಂಗ ಮಹಾ ಸಮ್ಮೇಳನ ಯಶಸ್ಸು ಕಂಡು, ಸಮುದಾಯದ ವಿಚಾರಗಳ ಗಹನ ಚರ್ಚೆ, ಸಂಘಟನೆಗೆ ಪೂರಕವಾದ ಅಂಶಗಳ ಕಡೆ ಬೆಳಕು ಚೆಲ್ಲಿದೆ. ಇದೇ ರೀತಿ ದೇವಾಂಗದಲ್ಲಿ ಕನ್ನಡ, ತೆಲುಗು, ತಮಿಳು ಭಾಷಾ ಬೇಧ ಎಣಿಸದೇ ಎಲ್ಲಾ ಉಪಜಾತಿಗಳು ಚದುರಿ ಹೋಗದೇ ಒಗ್ಗೂಡುವ ಅಗತ್ಯವಿದೆ ಎಂದರು.

ರಾಜ ಮಂಡ್ರಿ ದೇವಾಂಗ ಸಕ್ಷೇಮ ಸಂಘದ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ಸತ್ಯನಾರಾಯಣ್ ಮಾತನಾಡಿ, ನೇಕಾರಿಕೆಯನ್ನೇ ಕುಲಕಸುಬಾಗಿ ಹೊಂದಿರುವ ಸಮುದಾಯ ಇಡೀ ದೇಶದಲ್ಲಿದ್ದಾರೆ. ವೈವಿದ್ಯಮಯ ಬದುಕನ್ನು ನಡೆಸುತ್ತಿರುವ ಸಮುದಾಯದ ಎಲ್ಲರನ್ನೂ ಒಗ್ಗೂಡಿಸುವ ದಿಸೆಯಲ್ಲಿ ಫೆಬ್ರವರಿ 3 ರಿಂದ ಮೂರು ದಿನಗಳ ಕಾಲ ಆಂಧ್ರಪ್ರದೇಶದ ರಾಜ ಮಂಡ್ರಿಯಲ್ಲಿ ಅಖಿಲ ಭಾರತ ದೇವಾಂಗ ಮಹಾ ಸಮ್ಮೇಳನ ನಡೆಯಲಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ದೇವಾಂಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ದೇವಾಂಗ ಸಂಘ, ಶ್ರೀಗಾಯತ್ರಿ ಪೀಠ ಮಿತ್ರಬಳಗ ಟ್ರಸ್ಟ್, ತೆಲುಗು ದೇವಾಂಗ ಸಂಘ, ಆಂಧ್ರದೇವಾಂಗ ಯೂತ್ ಅಸೋಸಿಯೇಷನ್, ಸೇಲಂ ಕನ್ನಡ ದೇವಾಂಗ ಯುವಕರ ಸಂಘ ಶಾಖೆ, ಶ್ರೀ ಬಸವಣ್ಣ ಸೇವಾ ಸಮಿತಿ, ಕರ್ನಾಟಕ ದೇವಾಂಗ ಹಿತರಕ್ಷಣಾ ಸಮಿತಿ,  ಚೌಡೇಶ್ವರಿ ದೇವಾಂಗ ಮಹಿಳಾ ಸಂಘ, ಗಾಯತ್ರಿ ದೇವಿ ಮಹಿಳಾ ಟ್ರಸ್ಟ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT