ಚಾಮರಾಜನಗರ: `ಆಟೋ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಮತ್ತು ಸಮವಸ್ತ್ರ ಧರಿಸಬೇಕು~ ಎಂದು ಡಿವೈಎಸ್ಪಿ ಮುತ್ತುಸ್ವಾಮಿನಾಯ್ಡು ಹೇಳಿದರು.
ನಗರದ ಪಟ್ಟಣ ಪೊಲೀಸ್ ಠಾಣೆಯಿಂದ ಗುರುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿನಿತ್ಯವೂ ಜಿಲ್ಲಾ ಕೇಂದ್ರದಲ್ಲಿ ಸಾವಿರಾರು ವಾಹನ ಸಂಚರಿಸುತ್ತವೆ. ಎಲ್ಲ ಚಾಲಕರು ರಸ್ತೆ ಸಂಚಾರ ನಿಯಮ ಪಾಲಿಸಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಅತಿವೇಗವಾಗಿ ಚಲಿಸಿದರೆ ಅಪಘಾತ ಸಂಭವಿಸುತ್ತವೆ ಎಂದ ಅವರು, ಇದುವರೆಗೆ ಪಟ್ಟಣ ಠಾಣೆಯಿಂದ 375 ಆಟೋಗಳಿಗೆ ಪೊಲೀಸ್ ಇಲಾಖೆಯ ನಂಬರ್ ನೀಡಲಾಗಿದೆ ಎಂದರು.
ಆಟೋ ಚಾಲಕರು ಸಂಚಾರ ನಿಯಮ ಉಲ್ಲಂಘಿಸಬಾರದು. ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ನಿಧಾನವಾಗಿ ಚಲಿಸಬೇಕು. ಸರಕು ಸಾಗಣೆ ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯಬಾರದು ಎಂದು ಸೂಚಿಸಿದರು.
ವೃತ್ತ ನಿರೀಕ್ಷಕ ಅನ್ಸರ್ ಅಲಿ ಮಾತನಾಡಿ, ಜಿಲ್ಲಾ ಕೇಂದ್ರದ ವ್ಯಾಪ್ತಿಯ ಎಲ್ಲ ಶಾಲಾ- ಕಾಲೇಜುಗಳ ಮುಂಭಾಗ ವಾಹನ ಸವಾರರು ನಿಧಾನವಾಗಿ ಚಲಿಸ ಬೇಕು. ಅತಿವೇಗವಾಗಿ ಚಲಿಸಿದರೆ ದಂಡ ವಿಧಿಸಲಾಗುವುದು.
ದ್ವಿಚಕ್ರವಾಹನಗಳಲ್ಲಿ ಚಲಿಸುವಾಗ ಮೊಬೈಲ್ನಲ್ಲಿ ಸಂಭಾಷಣೆ ನಡೆಸುತ್ತಿರುವ ಪರಿಣಾಮ ರಸ್ತೆ ಅಪಘಾತ ಸಂಭವಿಸುತ್ತಿವೆ. ಇದಕ್ಕೆ ಕಡಿವಾಣ ಹಾಕಲಾಗುವುದು ಎಂದರು.
ಪಟ್ಟಣ ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಪಿ.ಆರ್. ಜನಾರ್ದನ್, ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೆ. ಸಂತೋಷ್, ಎಎಸ್ಐ ಚಿನ್ನಸ್ವಾಮಿ ಇತರರು ಹಾಜರಿದ್ದರು.