ಬೆಂಗಳೂರು: `ದೇಶದೆಲ್ಲೆಡೆ ನಾಯಿಕೊಡೆಗಳಂತೆ ತಲೆ ಎತ್ತಿರುವ ಬಂಜೆತನ ನಿವಾರಣಾ ಕೇಂದ್ರಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ಕೂಡಲೇ ಸಂತಾನೋತ್ಪತ್ತಿ ತಂತ್ರಜ್ಞಾನ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಬೇಕು~ ಎಂದು ಕಾಯ್ದೆಯ ಕರಡು ಸಮಿತಿ ಸದಸ್ಯೆ ಡಾ.ಕಾಮಿನಿ ರಾವ್ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ದೇಶದಲ್ಲೆಡೆ 700ಕ್ಕೂ ಹೆಚ್ಚು ಕೇಂದ್ರಗಳು ತಲೆ ಎತ್ತಿವೆ. ಇವು ಕೇವಲ ಮಕ್ಕಳ ಉತ್ಪಾದನಾ ಕೇಂದ್ರಗಳಂತೆ ಕೆಲಸ ಮಾಡುತ್ತಿದ್ದು ಮಕ್ಕಳ ಆಕಾಂಕ್ಷಿಗಳನ್ನು ಶೋಷಿಸುತ್ತಿವೆ. ವಿದೇಶದ ಮಂದಿ ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುವುದು ಹೆಚ್ಚುತ್ತಿದ್ದು ಸರಿಯಾದ ಕಾನೂನು ಇಲ್ಲದಿರುವುದರಿಂದ ಇವು ಗ್ರಾಹಕರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತಿವೆ~ ಎಂದರು.
`2010ರಲ್ಲಿ ರೂಪುಗೊಂಡ ಮಸೂದೆ ಸಂಸತ್ತಿನ ಅನುಮೋದನೆಗೆ ಕಾಯುತ್ತಿದೆ. ಕರಡಿನಲ್ಲಿ ಸಂತಾನೋತ್ಪತ್ತಿ ತಂತ್ರಜ್ಞಾನ ಕ್ಲಿನಿಕ್ಗಳಿಗೆ ಅನುಮತಿ ನೀಡುವುದು ಹಾಗೂ ಇವುಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ರಾಷ್ಟ್ರೀಯ ನಿಯಮ ರೂಪಿಸಲಾಗಿದೆ. ಅಲ್ಲದೆ ಕ್ಲಿನಿಕ್ಗಳ ಉಸ್ತುವಾರಿ ನೋಡಿಕೊಳ್ಳಲು ರಾಷ್ಟ್ರೀಯ ಹಾಗೂ ರಾಜ್ಯ ಸಲಹಾ ಮಂಡಳಿಗಳನ್ನು ರೂಪಿಸಲು ಸೂಚಿಸಲಾಗಿದೆ~ ಎಂದು ಹೇಳಿದರು.
`ಬಾಡಿಗೆ ತಾಯಿ, ಸಂತಾನೋತ್ಪತ್ತಿ ತಂತ್ರಜ್ಞಾನ ಬ್ಯಾಂಕ್ಗಳು, ರೋಗಿಗಳ ಖಾಸಗಿತನ, ರೋಗಿಗಳ ಹಕ್ಕು ಮತ್ತು ಜವಾಬ್ದಾರಿಗಳು, ದಾನಿಗಳು ಮತ್ತು ತಂತ್ರಜ್ಞಾನದ ಮೂಲಕ ಜನಿಸುವ ಮಕ್ಕಳು, ಲಿಂಗ ಆಯ್ಕೆಮತ್ತು ಜೈವಿಕ ಪತ್ತೆಯ ಪೂರ್ವ ಅಳವಡಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ರೂಪುರೇಷೆ ರೂಪಿಸಬೇಕಿದೆ~ ಎಂದು ಅವರು ತಿಳಿಸಿದರು.