ಕೊಕ್ರ ಝಾರ್ (ಅಸ್ಸಾಂ) (ಪಿಟಿಐ): ಸತತ ಹಿಂಸಾಚಾರ, ಗಲಭೆಗಳಿಂದಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರು ಶೀಘ್ರ ತಮ್ಮ ಮನೆಗಳಿಗೆ ತೆರಳಲಿದ್ದಾರೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ ಹಾಗೂ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಜತೆ ಸೋಮವಾರ ಗಲಭೆಪೀಡಿತ ಕೊಕ್ರ ಝಾರ್ ಹಾಗೂ ಧುಬ್ರಿ ಜಿಲ್ಲೆಗಳಿಗೆ ಭೇಟಿ ನೀಡಿದ ನಂತರ ಸೋನಿಯಾ ಗಾಂಧಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ತಿತಾಗುರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ ಸೋನಿಯಾ ಅಲ್ಲಿ ಆಶ್ರಯಪಡೆದಿರುವ ಸಂತ್ರಸ್ತರನ್ನು ಭೇಟಿ ಮಾಡಿದರು.
`ತಾವು ನಿತ್ಯ ಪಡಿತರ ಪಡೆಯುತ್ತಿದ್ದು ಯಾವುದೇ ಸಮಸ್ಯೆ ಇಲ್ಲ~ ಎಂದು ಸಂತ್ರಸ್ತರು ತಮಗೆ ತಿಳಿಸಿದರು ಎಂದು ಸೋನಿಯಾ ವಿವರಿಸಿದರು. ಗುವಾಹಟಿಯಿಂದ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಸೋನಿಯಾ ವಿವಿಧ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದರು. ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭುವನೇಶ್ವರ ಕಲಿತಾ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿ ಮುಖ್ಯಸ್ಥ ಹಗ್ರಾಮಾ ಮೊಹಿಲರಿ, ರಾಜ್ಯದ ಸಚಿವರು ಜತೆಯಲ್ಲಿದ್ದರು.