ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ವೀರಭದ್ರೇಶ್ವರ ದೇವಸ್ಥಾನದ ವೀರಭದ್ರ ಸ್ವಾಮಿಯ ರಥೋತ್ಸವವು ಮಂಗಳವಾರ ಸಂಜೆ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕಾರ್ತಿಕೋತ್ಸವದ ಅಂಗವಾಗಿ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸೂಡಿಯ ಕೊಟ್ಟೂರ ಬಸವೇಶ್ವರ ಸ್ವಾಮೀಜಿ ಅವರು ನಂದೀಶ್ವರ ದೇವರ ನೂತನ ಮೂರ್ತಿಯನ್ನು ಉದ್ಘಾಟಿಸಿದರು. ನಂತರ ಮೆರವಣಿಗೆಯು ಆರಂಭಗೊಂಡಿತು. ಬಮ್ಮಾಪುರ ಓಣಿ, ಹಿರೇಪೇಟೆ, ಬೆಳಗಾವಿಗಲ್ಲಿ, ದುರ್ಗದ ಬೈಲ್, ರಾಧಾಕೃಷ್ಣ ಗಲ್ಲಿ, ವೀರಾಪುರ ಓಣಿ ಮಾರ್ಗವಾಗಿ ಮೆರವಣಿಗೆಯು ಸಾಗಿತು.
ವೀರಗಾಸೆ ವೇಷಧಾರಿಗಳೊಂದಿಗೆ, ಪುರವಂತರು, ನಂದಿಕೋಲು, ಎತ್ತಿನ ಗಾಡಿಗಳು ಮೆರವಣಿಗೆಯಲ್ಲಿ ಕಾಣಿಸಿಕೊಂಡವು. ನಂತರ ನಡೆದ ಅಗ್ನಿ ಮಹೋತ್ಸವದಲ್ಲಿ ಭಕ್ತರು ಕೊಂಡದಲ್ಲಿನ ಕೆಂಡದ ಮೇಲೆ ನಡೆದರು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ ತೇರನ್ನು ಎಳೆಯುವ ಮೂಲಕ ದಿನದ ಕಾರ್ಯಕ್ರಮವು ಸಮಾಪ್ತಿಗೊಂಡಿತು.