ನವದೆಹಲಿ: `ಕೇಂದ್ರಿಯ ವಿದ್ಯಾಲಯ~ (ಕೆವಿ) ಪ್ರವೇಶಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯರ ಕೋಟಾ ರದ್ದು ಮಾಡಿ ದೆಹಲಿ ಹೈಕೋರ್ಟ್ ಹದಿನಾಲ್ಕು ವರ್ಷದ ಹಿಂದೆ ನೀಡಿರುವ ತೀರ್ಪು ಪ್ರಶ್ನಿಸಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಲಿದೆ ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಬುಧವಾರ ಲೋಕಸಭೆಗೆ ತಿಳಿಸಿದರು.
ಕೇಂದ್ರಿಯ ವಿದ್ಯಾಲಯದಲ್ಲಿ ಈಗಿರುವ ಸಂಸದರ ಕೋಟಾವನ್ನು ಎರಡರಿಂದ ಆರಕ್ಕೆ ಹೆಚ್ಚಿಸಲು ಮನವಿ ಮಾಡಲಾಗುವುದು. ಕೇಂದ್ರಿಯ ವಿದ್ಯಾಲಯ ಇಲ್ಲದ ಕ್ಷೇತ್ರಗಳ ಸಂಸದರು ನೆರೆಯ ಕೇಂದ್ರಿಯ ವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಶಿಫಾರಸು ಮಾಡಲು ಅವಕಾಶ ನೀಡುವಂತೆ ಮನವಿ ಮಾಡಲಾಗುವುದು ಎಂದು ಸಿಬಲ್ ಹೇಳೀದರು.
ಕೇಂದ್ರಿಯ ವಿದ್ಯಾಲಯಗಳ ಕಾಯ್ದೆಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ (ಮೀಸಲಾತಿ ಹಾಗೂ ಪ್ರವೇಶ) ಮೇಲೆ ಸದನ ಚರ್ಚಿಸುತ್ತಿದ್ದಾಗ ಸಮಾಜವಾದಿ ಪಕ್ಷದ ಸದಸ್ಯ ಶೈಲೇಂದ್ರ ಕುಮಾರ್ ಸಂಸದರ ಕೆವಿ ಕೋಟಾ ಕುರಿತು ಪ್ರಸ್ತಾಪಿಸಿದರು. ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಉದ್ದೇಶಿತ ಅರ್ಜಿ ಕುರಿತು ಹೆಚ್ಚಿನ ವಿವರಗಳನ್ನು ನೀಡಲು ಬಯಸಲಿಲ್ಲ.
1998ರಲ್ಲಿ ಸಂಸದರು ಮತ್ತು ಸಚಿವರ ಕೋಟಾವನ್ನು ದೆಹಲಿ ಹೈಕೋರ್ಟ್ ರದ್ದುಮಾಡಿದೆ. ಈ ಅವಕಾಶ ಸಂವಿಧಾನದ 14ನೇ ಕಲಂ ಉಲ್ಲಂಘನೆಯಾಗಿದ್ದು, ಇದು ಎರಡು ವರ್ಗದ ವಿದ್ಯಾರ್ಥಿಗಳನ್ನು ಸೃಷ್ಟಿಸಲಿದೆ. ಇದು ರಾಜಕೀಯ ಹಿತಾಸಕ್ತಿಗಳ ಸಾಧನೆಗಾಗಿ ದುರುಪಯೋಗ ಆಗಲಿದೆ ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿತ್ತು.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸಂಸದರ ಕೋಟಾ ಹೆಚ್ಚಿಸುವ ತನ್ನ ಪ್ರಸ್ತಾವವನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಿ ಅಭಿಪ್ರಾಯ ಕೇಳಿತ್ತು.
`ಇದು ಸಂವಿಧಾನಬಾಹಿರ ಕ್ರಮ~ ಎಂಬ ಅಭಿಪ್ರಾಯವನ್ನು ಕಾನೂನು ಸಚಿವಾಲಯ ನೀಡಿದೆ ಎಂದು ಸಿಬಲ್ ನುಡಿದರು.