ಶಿವಮೊಗ್ಗ: ನಮ್ಮ ನಾಡಿನ ಸಾಹಿತ್ಯ, ಕಲೆ-ಸಂಸ್ಕೃತಿ ಜನರಿಗೆ ಪರಿಚಯಿಸುವ ಅಗತ್ಯ ಈಗ ಇದೆ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ನಗರಸಭಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಹಮ್ಮಿಕೊಂಡಿದ್ದ `ಸಾಹಿತ್ಯ ದಸರಾ ಕಾರ್ಯಕ್ರಮ~ವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಕ್ಕೆ ಅಖಂಡವಾದ ಸಾಹಿತ್ಯ ಪರಂಪರೆಯಿದೆ. ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕೂಡ ಸಿಕ್ಕಿದೆ. ಆದರೆ, ಜನರಿಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಸಾಲದು. ಹಾಗಾಗಿ, ಸಾಹಿತ್ಯ, ಕಲೆ- ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಶಾಲಾ- ಕಾಲೇಜುಗಳಿಗೆ, ಜನಸಾಮಾನ್ಯರಿಗೆ ತಲುಪಿಸುವ ಕೆಲಸಕ್ಕೆ ಮುಂದಾಗಬೇಕು. ಈ ಕಾರ್ಯಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಕಲಾವಿದರು 12ನೇ ಶತಮಾನದ 20 ಕವಿಗಳು ರಚಿಸಿರುವ ಕವಿತೆಗಳ ವಾಚನ, ವಿಶ್ಲೇಷಣೆ, ಗಾಯನ, ನೃತ್ಯ ಹಾಗೂ ಕುಂಚವನ್ನು ರಂಗದ ಮೇಲೆ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಪದಾಧಿಕಾರಿಗಳಾದ ಪ್ರಕಾಶ್ ಆರ್. ಕಮ್ಮಾರ್, ಇಟಗಿ ಈರಣ್ಣ, ವಿಜಯಲಕ್ಷ್ಮೀ ಪಾಟೀಲ್, ನಗರಸಭಾ ಆಯುಕ್ತ ಪಿ.ಜಿ. ರಮೇಶ್ ಉಪಸ್ಥಿತರಿದ್ದರು.