ಹೊನ್ನಾಳಿ: ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆಯಬೇಕಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ `ಸಕಾಲ~ ಯೋಜನೆಯ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ 11 ಇಲಾಖೆಗಳ 151 ಯೋಜನೆಗಳನ್ನು ಸದ್ಯಕ್ಕೆ ಸಕಾಲ ವ್ಯಾಪ್ತಿಗೆ ಸೇರಿಸಲಾಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ನಿಗದಿತ ಅವಧಿಯಲ್ಲಿ ಕಾರ್ಯಗಳನ್ನು ಮಾಡಿಕೊಡಬೇಕು. ಇಲ್ಲವಾದಲ್ಲಿ, ವಿಳಂಬ ಮಾಡುವ ಅಧಿಕಾರಿಯ ಸಂಬಳದಲ್ಲಿ ದಿನಕ್ಕೆ ್ಙ 20ರಂತೆ ಕಡಿತಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಕಲಾ ಜಾಥಾದ ಕಲಾವಿದರು `ಸಕಾಲ~ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ತಾಲ್ಲೂಕಿನ 10 ಗ್ರಾಮ ಪಂಚಾಯ್ತಿಗಳನ್ನು ಆಯ್ಕೆ ಮಾಡಲಾಗಿದೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.
ತಾಲ್ಲೂಕು ಪಂಚಾಯ್ತಿ ಇಒ ಎಚ್. ಹುಲಿರಾಜ್ ಮಾತನಾಡಿ, ಬೀದಿ ನಾಟಕ, ಜಾಗೃತಿ ಗೀತೆಗಳು ಮತ್ತು ಅಭಿನಯದ ಮುಖಾಂತರ ಜನರಿಗೆ `ಸಕಾಲ~ದ ಬಗ್ಗೆ ಅರಿವು ಮೂಡಿಸುವುದು ಈ ಜಾಥಾದ ಉದ್ದೇಶವಾಗಿದೆ ಎಂದು ತಿಳಿಸಿದರು.
ಬಿಇಒ ಕೆ.ಸಿ. ಮಲ್ಲಿಕಾರ್ಜುನ್ ಮಾತನಾಡಿದರು. ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ, ತಾಲ್ಲೂಕು ಪಂಚಾಯ್ತಿಗಳ ಆಶ್ರಯದಲ್ಲಿ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದ ಕಲಾ ತಂಡದ ಕಲಾವಿದರು ಜನ ಜಾಗೃತಿ ಗೀತೆ ಗಾಯನ ಮತ್ತು ಬೀದಿನಾಟಕ ಪ್ರದರ್ಶಿಸಿದರು.
ಮಹಾಂತೇಶ್, ಹಾಲೇಶ್ ರಾಂಪುರ, ರುದ್ರೇಶ್, ರಂಗಸ್ವಾಮಿ, ಮಂಜುಳಾ, ರೇಣುಕಾ, ಜಾಫರ್, ನಾಗರಾಜು, ಹನುಮಂತಪ್ಪ ಇದ್ದರು.