ಚಿಂತಾಮಣಿ: ಜಾಗತೀಕರಣದ ಪರಿಣಾಮ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ವಿನಾಶದ ಅಂಚಿಗೆ ತಲುಪುತ್ತಿವೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಕಳವಳ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ಕೈಗಾರಿಕಾ ವಿಚಾರ ಸಂಕಿರಣ ಹಾಗೂ ಎರಡು ದಿನಗಳ ಗೃಹೋಪಯೋಗಿ ರಾಸಾಯನಿಕ ಉತ್ಪನ್ನಗಳ ಪ್ರಾತ್ಯಕ್ಷಿಕೆ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಗರಬತ್ತಿ ತಯಾರಿಕೆ, ಮೇಣದ ಬತ್ತಿ, ಬೀಡಿ ಕಟ್ಟುವುದು ಮತ್ತಿತತರ ಸಣ್ಣ ಉದ್ಯಮಗಳು ನಗರದಲ್ಲಿ ಮುಚ್ಚಿ ಹೋಗಿವೆ. ಸಣ್ಣ ಕೈಗಾರಿಕೆಗಳ ಉತ್ಪನ್ನ ಗಳು ದೊಡ್ಡ ಉದ್ದಿಮೆಯ ಉತ್ಪನ್ನಗಳ ಎದುರು ಪೈಪೋಟಿ ನೀಡಿದೆ ಮುಳು ಗುತ್ತಿವೆ ಎಂದರು.
ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘ ಗಳು ಸಣ್ಣ ಉದ್ದಿಮೆಗಳಲ್ಲಿ ತೊಡಗಿದ್ದು ಇವುಗಳ ರಕ್ಷಣೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ನಗರದಲ್ಲಿ ಶಿಶು ಅಭಿವೃದ್ಧಿ ಕೇಂದ್ರ, ರೈತ ಸಂತೆ ಹಾಗೂ ಮಹಿಳೆಯರ ಉತ್ಪನ್ನಗಳ ಮಾರಾಟ ಮಳಿಗೆ ನಿರ್ಮಿಸಲು 4 ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಸರ್ಕಾರಿ ಜಾಗವನ್ನು ಒತ್ತುವರಿದಾರರಿಂದ ತೆರವು ಮಾಡಿಸಲು ಸಾಧ್ಯವಾಗಿಲ್ಲ ಎಂದರು.
ನಗರದಲ್ಲಿ ಉತ್ತಮ ಜೋಡಿ ರಸ್ತೆಗಳು, ನೀರು ಹಾಗೂ ಇನ್ನಿತರ ಮೂಲಸೌಲಭ್ಯ ಒದಗಿಸಿದಾಗ ಉದ್ದಿಮೆದಾರರನ್ನು ಆಕರ್ಷಿಸ ಬಹುದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶೇಖರಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಚಿನ್ನಪ್ಪ, ವೀಣಾಗಂಗುಲಪ್ಪ, ಉಮಾದೇವಿ, ಮಂಜುಳಮ್ಮ. ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ, ಅಧಿಕಾರಿಗಳಾದ ವಿ.ಟಿ.ವೆಂಕಟೇಶ್, ಜೈಕುಮಾರ್, ಎಲ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.