ಮಾಲೂರು: ಪಟ್ಟಣದ ಜನತೆಗೆ ಮೂಲ ಸೌಲಭ್ಯ ಒದಗಿಸುವಲ್ಲಿ ಪುರಸಭಾ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಪುರಸಭಾ ಸದಸ್ಯರೇ ಸಾಮಾನ್ಯ ಸಭೆ ನಡೆಯುವ ಪುರಸಭೆ ಸಭಾಭವನಕ್ಕೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ಪುರಸಭೆ ಮುಂಭಾಗ ನಡೆಯಿತು.
ಪುರಸಭೆಯಲ್ಲಿ ಐದು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ಪುರಸಭೆ ಅಧ್ಯಕ್ಷೆ ಅಮುದಾ, ಮುಖ್ಯಾಧಿಕಾರಿ ರುದ್ರಮುನಿ ಪಟ್ಟಣದ ಅಭಿವೃದ್ಧಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ವಪಕ್ಷ ಸದಸ್ಯರೇ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
ಸದಸ್ಯೆ ನೀಲಾಚಂದ್ರ ಮಾತನಾಡಿ ಪಟ್ಟಣದಲ್ಲಿ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಸ್ವಚ್ಛತೆಯಿಲ್ಲದೆ ಜನ ತತ್ತರಿಸುತ್ತಿದ್ದಾರೆ. ಪುರಸಭೆ ಅಧ್ಯಕ್ಷರು ನಿರ್ಲಿಪ್ತರಾಗಿದ್ದಾರೆ. ವಾರ್ಡಿನ ಜನ ಕುಡಿಯುವ ನೀರು ಪೂರೈಸುವಂತೆ ಸದಸ್ಯರ ಮೇಲೆ ಒತ್ತಡ ಏರುತ್ತಿದ್ದು, ಇಲ್ಲಿನ ಮುಖ್ಯಾಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
23 ವಾರ್ಡುಗಳಲ್ಲಿ ಮೂಲ ಸಮಸ್ಯೆ ಹೆಚ್ಚಿದ್ದು, ಇಂದಿನ ಸಾಮಾನ್ಯ ಸಭೆಯಲ್ಲಿ ಭೂಪರಿವರ್ತನೆ ವಿಷಯಗಳನ್ನು ಮಂಜೂರು ಮಾಡಿಸಿಕೊಳ್ಳಲು ಸಭೆ ನಡೆಸಲಾಗುತ್ತಿದೆ. ಈ ಸಭೆಯಿಂದ ಸಾಮಾನ್ಯರಿಗೆ ಅನುಕೂಲವಿಲ್ಲ. ಆದ್ದರಿಂದ ಅಧ್ಯಕ್ಷರು-ಮುಖ್ಯಾಧಿಕಾರಿ ಪಟ್ಟಣದ ಜನತೆಗೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗುವ ತನಕ ಸಭಾಭವನದ ಬೀಗ ತೆರೆಯುವುದಿಲ್ಲ ಎಂದು ನೀಲಾಚಂದ್ರ ಗುಡುಗಿದರು.
ಪುರಸಭೆ ಸದಸ್ಯರಾದ ಎ.ರಾಜಪ್ಪ, ಎಂ.ಕೆ.ಆಂಜಿನಪ್ಪ, ಗುಲಾಬ್ಜಾನ್, ಮುನಿವೆಂಕಟಪ್ಪ, ಎಂ.ಸಿ.ರವಿ, ಮುಖಂಡರಾದ ಗೂಡುನಾಗರಾಜ್, ಷಣ್ಮುಗ, ಸಾಬುಸಾಬ್ ಭಾಗವಹಿಸಿದ್ದರು.