ಕಳಸ: ಪಾರಂಪರಿಕ ಅರಣ್ಯವಾಸಿಗಳ ಹಕ್ಕುಕಾಯ್ದೆ ಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅರಣ್ಯ ವಾಸಿಗಳ ಬದುಕಿಗೆ ನೆಮ್ಮದಿ ತರಬೇಕು ಎಂಬುದು ಕಳಸ ಗ್ರಾಮ ಪಂಚಾಯಿತಿಯು ಗುರುವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಪ್ರಮುಖವಾಗಿ ಕೇಳಿ ಬಂದ ಒತ್ತಾಯ.
ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಚರ್ಚೆ ನಡೆಸಲು ದುರ್ಗಾ ಮಂಟಪದಲ್ಲಿ ವಿಶೇಷವಾಗಿ ಕರೆದಿದ್ದ ಗ್ರಾಮ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಚಂದ್ರೇಗೌಡ, ಕಳಸ ಗ್ರಾ.ಪಂ. ಅಧ್ಯಕ್ಷ ಸಂತೋಷ್, ಜಿ.ಪಂ. ಸದಸ್ಯೆ ಕವಿತಾ, ತಾ.ಪಂ. ಅಧ್ಯಕ್ಷ ಶೇಷಗಿರಿ, ಸದಸ್ಯರಾದ ರಾಜೇಂದ್ರ, ಅನ್ನಪೂರ್ಣ ಮತ್ತಿತರರು ಭಾಗವಹಿಸಿದ್ದರು.
ಕಳೆದ ಬಾರಿ ಅರಣ್ಯ ಕಾಯ್ದೆಯಲ್ಲಿ ಭೂಮಿಯ ಹಕ್ಕು ಪಡೆಯಲು ಅರ್ಜಿ ಸಲ್ಲಿಸಿದ ಅನೇಕ ಗಿರಿಜನ ರಿಗೂ ಭೂ ದಾಖಲೆ ಸಿಕ್ಕಿಲ್ಲ ಎಂದ ಗ್ರಾಮಸ್ಥರು ದೂರಿ ದರು. ಗಿರಿಜನರಲ್ಲದ ಇತರೆ ಪಂಗಡಗಳ 400 ಅರ್ಜಿಗಳ ಪೈಕಿ ಒಬ್ಬರಿಗೂ ಹಕ್ಕು ಪತ್ರ ನೀಡದ ಬಗ್ಗೆಯೂ ಅರಣ್ಯವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದರು.
ಮೂರು ತಲೆಮಾರುಗಳ ವಾಸವನ್ನು ಪುಷ್ಟೀ ಕರಿಸಲು ಕೃಷಿಕರು ತಾವು ಬೆಳೆಸಿದ ಮರ, ತೋಡಿದ ಬಾವಿ, ನಿರ್ಮಿಸಿದ ಮನೆ, ಸ್ಮಶಾನ, ಕೆರೆ-ಕಟ್ಟೆ ಅಥವಾ ಯಾವುದೇ ಕಾಮಗಾರಿಯನ್ನು ದಾಖಲೆಗಾಗಿ ನಮೂದಿಸಬಹುದು ಎಂದೂ ಅವರು ಮಾಹಿತಿ ನೀಡಿದರು.
ಅರಣ್ಯ ಹಕ್ಕು ಕಾಯ್ದೆಯ ಅನ್ವಯ ಹಕ್ಕುಪತ್ರ ಪಡೆದಿದ್ದ ಗಿರಿಜನರಿಗೂ ಇನಾಂ ಭೂಮಿ ಖುಲ್ಲಾ ಮಾಡುವಂತೆ ನೋಟಿಸ್ ನೀಡಿದ್ದು ಯಾಕೆ? ಎಂದು ಗ್ರಾಮಸ್ಥರು ವಲಯ ಅರಣ್ಯಾಧಿಕಾರಿ ಪ್ರಹ್ಲಾದ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಅರಣ್ಯ ಹಕ್ಕು ಪತ್ರ ಪಡೆದ ಫಲಾನುಭವಿಗಳು ಒತ್ತುವರಿ ತೆರವು ನೋಟಿಸ್ ಬಗ್ಗೆ ಭಯ ಪಡುವುದು ಬೇಡ. ಅರಣ್ಯ ವಾಸಿಗಳು ಹೊಂದಿರುವ ದಾಖಲೆಗಳ ಪರಿಶೀಲನೆಗಾಗಿ ನೋಟಿಸ್ ನೀಡಲಾಗಿದೆ ಎಂದು ಪ್ರಹ್ಲಾದ್ ಸ್ಪಷ್ಟನೆ ನೀಡಿದರು. ಇನಾಂ ಭೂಮಿಯ ವಿವಾದ ನ್ಯಾಯಾಲಯದಲ್ಲಿ ಇದ್ದಾಗಲೇ ಎಲ್ಲ ಕೃಷಿಕರಿಗೂ ಭೂಮಿ ಖುಲ್ಲಾ ಮಾಡುವಂತೆ ನೋಟಿಸ್ ನೀಡಿದ್ದು ತಪ್ಪು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಇನಾಂ ಭೂಮಿ ವಾಸಿಗಳ ಮತ್ತು ಇನಾಂಭೂಮಿಯ ಈಗಿನ ಸ್ಥಿತಿಗತಿಯ ಬಗ್ಗೆ ಮಾಹಿತಿ ನೀಡಲು ಸೂಚನೆ ಬಂದಿರುವುದರಿಂದ ನೋಟಿಸ್ ನೀಡುವುದು ಅನಿವಾರ್ಯವಾಗಿತ್ತು ಎಂದು ವಲಯ ಅರಣ್ಯಾಧಿ ಕಾರಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು. ಅರಣ್ಯ ಹಕ್ಕು ಸಮಿತಿಯ ಗ್ರಾಮ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರ ಸದಸ್ಯರ ಗೈರುಹಾಜರಿಯಿಂದಾಗಿ ಮುಂದಕ್ಕೆ ಹೋಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.