ಚಿಕ್ಕನಾಯಕನಹಳ್ಳಿ: ವಿವಾದಕ್ಕೆ ಕಾರಣವಾಗಿದ್ದ ಕೋಡುಗಲ್ಲು ರಸ್ತೆಯಲ್ಲಿನ ಸಮಾಧಿ ಇರುವ ಸ್ಥಳ ಪುರಸಭೆಗೆ ಸೇರಿದ್ದಾಗಿದೆ ಎಂದು ಪುರಸಭಾ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.
ಗುರುವಾರ ಕೋಡುಗಲ್ಲು ರಸ್ತೆಯ ಸರ್ಕಾರಿ ಜಾಗದಲ್ಲಿದ್ದ ಗೋಕಟ್ಟೆ ಹಾಗೂ ಸಮಾಧಿ ಇರುವ ಪ್ರದೇಶವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಅಳತೆ ಮಾಡಲಾಯಿತು. ಅಳತೆ ಆಧಾರದಂತೆ ಸಮಾಧಿಯೂ ಸೇರಿದಂತೆ ಗೋ ಕಟ್ಟೆಯು ಸರ್ಕಾರಿ ಜಾಗವಾಗಿರುವ ಬಗ್ಗೆ ತೀರ್ಮಾನಿಸಲಾಯಿತು.
ಸಮಾಧಿ ಇರುವ ಜಾಗ ತಮ್ಮದು ಎಂದು ಸಮಾಧಿ ಒಡೆಸಿ ವಿವಾದಕ್ಕೆ ಕಾರಣರಾದ ಮಮ್ತಾಜ್ ಎಂಬುವರ ನಿವೇಶನವು ಸಮಾಧಿ ಸ್ಥಳದಿಂದ ಸುಮಾರು ಒಂದು ಮೀಟರ್ನಷ್ಟು ದೂರಲ್ಲಿರುವ ಬಗ್ಗೆ ಮೋಜುಣಿದಾರರರು ಖಚಿತ ಪಡಿಸಿದರು. ಇದರಿಂದ ಕಳೆದ ಐದು ದಿನಗಳಿಂದ ನಡೆದಿದ್ದ ವಿವಾದ ಬಗೆಹರಿದಿದೆ ಎಂದು ಪುರಸಭಾ ಅಧ್ಯಕ್ಷ ದೊಡ್ಡಯ್ಯ ತಿಳಿಸಿ ಈ ಪ್ರದೇಶವನ್ನು ಉದ್ಯಾನವನ್ನಾಗಿ ಆಭಿವೃದ್ಧಿಪಡಿಸಲು ಈಗಾಗಲೇ ಎರಡು ಲಕ್ಷ ರೂಪಾಯಿ ತೆಗೆದಿರಿಸಲಾಗಿದೆ ಎಂದರು.
ವಿವಾದಿತ ಸ್ಥಳದ ಅಳತೆ ಮಾಡುವ ಸಂದರ್ಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿಪಿಐ ರವಿಪ್ರಸಾದ್, ಪಿಎಸ್ಐ ಶಿವಕುಮಾರ್, ಪುರಸಭೆ ಉಪಾಧ್ಯಕ್ಷ ಮೈನ್ಸ್ ರವಿ, ಮುಖ್ಯಾಧಿಕಾರಿ ಹೊನ್ನಪ್ಪ ಮುಂತಾದವರಿದ್ದರು.