ಯಲ್ಲಾಪುರ: ರಾಜ್ಯ ಸರ್ಕಾರ ಆಭರಣಗಳ ಮೇಲಿನ ಮಾರಾಟ ತೆರಿಗೆ ಏರಿಸಿರುವುದನ್ನು ಇಳಿಕೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಸರಾಫ ಸಂಘ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ಪ್ರಮುಖರು ತಹಸೀಲ್ದಾರರ ಮುಖಾಂತರ ಮುಖ್ಯ ಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರ ಏಪ್ರಿಲ್ 1ರಿಂದ ಜಾರಿಯಾಗುವಂತೆ ಆಭರಣ ಮಾರಾಟ ತೆರಿಗೆಯನ್ನು ಶೇ. 2 ರೂಪಾಯಿಗೆ ಹೆಚ್ಚಿಸಲಾಗಿದೆ. ಈಗಾಗಲೇ ಬೆಲೆ ಹೆಚ್ಚಳದಿಂದ ಆಭರಣ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಜೀವನಾವಶ್ಯಕ ಬೆಲೆ ಏರಿಕೆಯಿಂದಾಗಿ ಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿರುವ ಗ್ರಾಹಕನಿಗೆ ಈಗ ಏರಿಸಿರುವ ತೆರಿಗೆ ಇನ್ನಷ್ಟು ಹೊರೆಯಾಗಲಿದೆ. ಶ್ರೀಮಂತ ಗ್ರಾಹಕರು ತೆರಿಗೆ ಕಡಿಮೆ ಇರುವ ಹೊರ ರಾಜ್ಯಗಳಲ್ಲಿ ಆಭರಣ ಖರೀದಿ ಮಾಡುವುದರಿಂದ ರಾಜ್ಯದ ಸುವರ್ಣ ಕಲಾಕಾರರಿಗೆ ಕೆಲಸವಿಲ್ಲದಂತಾಗಲಿದೆ. ಇದರಿಂದ ಆಭರಣ ಉದ್ಯಮ ಸಂಕಷ್ಟಕ್ಕೊಳಗಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರಾಫ ಸಂಘದ ಮತ್ತು ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರಾದ ಪ್ರಕಾಶ ಶೇಟ ತಹಸೀಲ್ದಾರ ಮಂಜುನಾಥ ಬಳ್ಳಾರಿಯವರಿಗೆ ಮನವಿ ಸಲ್ಲಿಸಿದರು.ಪ್ರಮುಖರಾದ ಉಲ್ಲಾಸ ಪಾಟೀಲ್, ಉದಯ ರೇವಣಕರ್, ನರೇಂದ್ರ ಪಾಟೀಲ್, ನಾಗೇಂದ್ರ ಕುರ್ಡೇಕರ್, ಅರವಿಂದ ವರ್ಣೆಕರ್ ಮುಂತಾದವರು ಉಪಸ್ಥಿತರಿದ್ದರು.