ನವದೆಹಲಿ: `ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್~ (ಬಿಎಂಐಸಿ) ಯೋಜನೆ ಕೈಗೆತ್ತಿಕೊಂಡಿರುವ `ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್~(ನೈಸ್)ಗೆ 41ಕಿ.ಮೀ ಉಪ ರಸ್ತೆಗಳನ್ನು ನಿರ್ಮಿಸಲು ಏಳು ಎಕರೆ ಜಮೀನು ನೀಡಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ `ನ್ಯಾಯಾಲಯ ನಿಂದನೆ ಪ್ರಕ್ರಿಯೆ~ ಆರಂಭಿಸಬೇಕೆಂದು ಮನವಿ ಮಾಡಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿತು.
`ಬಿಎಂಐಸಿ~ ಯೋಜನೆಯನ್ನು ಸಾಧ್ಯವಾದಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್ ಹೋದ ವರ್ಷ ಫೆಬ್ರುವರಿ 2ರಂದು ಆದೇಶ ನೀಡಿದ್ದರೂ ರಾಜ್ಯ ಸರ್ಕಾರ ಭೂಮಿ ಕೊಡದೆ ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶಕ್ಕೆ ಅಗೌರವ ತೋರಿದೆ ಎಂಬ ನೈಸ್ ಕಂಪೆನಿ ವಾದವನ್ನು ನ್ಯಾ.ಜಿ.ಎಸ್.ಸಿಂಘ್ವಿ ಹಾಗೂ ನ್ಯಾ.ಮುಖೋಪಾಧ್ಯಾಯ ಅವರನ್ನು ಒಳಗೊಂಡಿರುವ ಪೀಠ ತಿರಸ್ಕರಿಸಿತು.
ಈ ವಿಷಯದಲ್ಲಿ ನ್ಯಾಯಾಲಯ ನಿಂದನೆ ಮಾಡಿದ ಸಂದರ್ಭಗಳು ಕಾಣುತ್ತಿಲ್ಲ. ಆದರೆ, ಫೆಬ್ರುವರಿ 2ರ ಆದೇಶ ಜಾರಿಯಲ್ಲಿದೆ ಎಂದು ರಾಜ್ಯಕ್ಕೆ ಮತ್ತೆ ಹೇಳುವ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
`ನೈಸ್~ ಪರ ಹಾಜರಾದ ಹಿರಿಯ ವಕೀಲ ದುಶ್ಯಂತ್ ದವೆ, ಬೆಂಗಳೂರು ಉತ್ತರ ತಾಲ್ಲೂಕಿನ ತೋಟದಗುಡ್ಡದಹಳ್ಳಿ ಮತ್ತು ದಾಸನಪುರದಲ್ಲಿ 3.19 ಹಾಗೂ 4.3 ಎಕರೆ ಭೂಮಿಯನ್ನು ಸರ್ಕಾರ ಕಂಪೆನಿಗೆ ಹಸ್ತಾಂತರ ಮಾಡಿಲ್ಲ ಎಂದು ಆರೋಪಿಸಿದರು.