ಚಿಕ್ಕಬಳ್ಳಾಪುರ: ರೈತರು ಬ್ಯಾಂಕುಗಳಿಂದ ಸಿಗುವ ಸಾಲದ ನೆರವು ಮತ್ತ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ರೈತರು ಮುಂದಾಗಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ರೈತರಲ್ಲಿ ಜಾಗೃತಿ ಮೂಡಬೇಕು ಎಂದು ಪಶು ವೈದ್ಯಾಧಿಕಾರಿ ಡಾ. ಮಧುರನಾಥ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ಗೌಚೇನಹಳ್ಳಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ವಿನಾಯಕ ರೈತರ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ’ ಎಂದು ಅವರು ತಿಳಿಸಿದರು.
ರೈತರ ಕೂಟವನ್ನು ರಚಿಸಿಕೊಳ್ಳುವ ಮೂಲಕ ಗ್ರಾಮದ ರೈತರು ಉತ್ತಮ ಕೆಲಸ ಮಾಡಿದ್ದಾರೆ. ಬ್ಯಾಂಕುಗಳಿಂದ ಮತ್ತು ಸಂಘಸಂಸ್ಥೆಗಳಿಂದ ಸಾಲವನ್ನು ಪಡೆದುಕೊಳ್ಳಲು ಮತ್ತು ಸಂಘಟನಾತ್ಮಕವಾಗಿ ಕೆಲಸ ಕಾರ್ಯ ಕೈಗೊಳ್ಳಲು ರೈತರ ಕೂಟಗಳು ಉಪಯುಕ್ತವಾಗಲಿವೆ ಎಂದು ಅವರು ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುದ್ದೇನಹಳ್ಳಿ ಶಾಖೆಯ ವ್ಯವಸ್ಥಾಪಕ ಸುನೀಲ್ ಮಾತನಾಡಿ, ‘ಕೃಷಿ ಚಟುವಟಿಕೆಗಳಿಗೆ ಬ್ಯಾಂಕುಗಳ ಮೂಲಕ ರೈತರು ಸಾಲ ಪಡೆದುಕೊಳ್ಳಬಹುದು. ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದರ ಮೂಲಕ ಉತ್ತಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು’ ಎಂದರು.
ವಿಜಯಾ ಬ್ಯಾಂಕ್ನ ವ್ಯವಸ್ಥಾಪಕ ಕನ್ಯಪ್ಪ, ಗ್ರಾಮೀಣ ಅಭಿವೃದ್ಧಿ ಸೊಸೈಟಿಯ ಕಾರ್ಯದರ್ಶಿ ಟಿ.ಮುನಿರಾಜು, ಗ್ರಾಮದ ಮುಖಂಡ ನಾರಾಯಣಪ್ಪ, ಮುಖ್ಯ ಶಿಕ್ಷಕ ಚನ್ನಬಸವಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಣ್ಣ, ಮುನಿನಾರಾಯಣಪ್ಪ ಉಪಸ್ಥಿತರಿದ್ದರು.