ನವದೆಹಲಿ (ಪಿಟಿಐ): ಪ್ರಸ್ತುತ ಭಾರತ ಹಾಕಿ ತಂಡದಲ್ಲಿರುವ ಆಟಗಾರರ ಪೈಕಿ ಸರ್ದಾರ್ ಸಿಂಗ್ ಮಾತ್ರ ಅತ್ಯಂತ ಸಮರ್ಥ ಆಟಗಾರ ಎಂದು ಭಾರತ ತಂಡದ ಮಾಜಿ ನಾಯಕ ಬಲ್ಬೀರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಹಾಕಿ ತಂಡದ ಸದ್ಯದ ಸ್ಥಿತಿ ಹಾಗೂ ಆಟಗಾರರ ಸಾಮರ್ಥ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
ಭಾರತ ಹಿಂದೆ ಸತತ ಆರು ಒಲಿಂಪಿಕ್ಸ್ಗಳಲ್ಲಿ ಚಿನ್ನ ಗೆದ್ದುದನ್ನು ನೆನಪಿಸಿಕೊಂಡ ಅವರು ಭಾರತ ಹಾಕಿಯ ಸುವರ್ಣ ಕಾಲ ಅದು ಎಂದರು.
‘ಪ್ರಸಕ್ತ ತಂಡದ ಇತರ ಆಟಗಾರರಿಗೆ ಹೋಲಿಸಿದರೆ ಆ ಕಾಲದ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದ್ದ ಆಟಗಾರ ಎಂದರೆ ಸರ್ದಾರ್ ಸಿಂಗ್ ಮಾತ್ರ ’ ಎಂದು ಹೇಳಿದ್ದಾರೆ.
‘ತಂಡದ ಆಟಗಾರರು ಕೌಶಲ ಹೊಂದಿದ್ದರೆ ಖಂಡಿತವಾಗಿ ತಂಡ ಗೆಲುವು ಪಡೆಯುತ್ತದೆ. ಜೊತೆಗೆ ಮತ್ತೆ ಅಗ್ರ ಸ್ಥಾನಕ್ಕೆ ಏರುತ್ತದೆ. ಇದಕ್ಕೆ ಬೇಕಿರುವುದು ಅಭ್ಯಾಸವೇ ಹೊರತು, ಕೇವಲ ಯೋಜನೆ, ಹಣದಿಂದ ಇದು ಸಾಧ್ಯವಿಲ್ಲ. ಆಟಗಾರರು ಕಠಿಣ ಅಭ್ಯಾಸದ ಮೂಲಕ ವೈಯಕ್ತಿಕ ಕೌಶಲಗಳನ್ನು ವೃದ್ಧಿಸಿಕೊಳ್ಳುವತ್ತ ಗಮನ ಹರಿಸಬೇಕಿರುವುದೂ ಅಷ್ಟೇ ಅವಶ್ಯಕ’ ಎಂದು ಸಲಹೆ ನೀಡಿದ್ದಾರೆ.