ಸವದತ್ತಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ.ನ ಅಧ್ಯಕ್ಷರಾಗಿ ಹಿರೇಕುಂಬಿ ಗ್ರಾಮದ ಸುರೇಶ ಹಾರೋಬೆಳವಡಿ. ಉಪಾಧ್ಯಕ್ಷರಾಗಿ ಶಿರಸಂಗಿ ಗ್ರಾಮದ ಹನಂತ ಚನ್ನಬಸಪ್ಪನವರ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿಯಾದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಲಿಂಗಯ್ಯ ಹಿರೇಮಠ ಘೋಷಿಸಿದರು.
ನಂತರ ನಡೆದ ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಶಾಸಕ ಆನಂದ ಮಾಮನಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಟ್ಟಿಕೊಂಡು ಜನರಿಂದ ಆಯ್ಕೆಯಾದ ನಾವುಗಳು ಪಕ್ಷ ಬೇಧ ಮರೆತು, ಒಗ್ಗುಡಿ ಕೆಲಸ ಮಾಡಿದಾಗ ಮಾತ್ರ ಪಟ್ಟಣ ಪ್ರಗತಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ತಾ.ಪಂ. ನಿಕಟಪೂರ್ವ ಅಧ್ಯಕ್ಷ ಪರ್ವತಗೌಡ ಪಾಟೀಲ ಮಾತನಾಡಿದರು. ಶಿವಾನಂದ ಹೂಗಾರ, ಬಸಯ್ಯ ಹಿರೇಮಠ, ತಾ.ಪಂ. ಮಾಜಿ ಉಪಾಧ್ಯಕ್ಷೆ ಮಹಾದೇವಿ ರವದಿ, ತಹಶೀಲ್ದಾರ ಎನ್.ಎಂ. ಗೋಠೆ, ವಿರೂಪಾಕ್ಷ ಹನಸಿ, ಜಿ.ಪಂ. ಸದಸ್ಯೆ ರತ್ನವ್ವ ತೇಗೂರ ಹಾಜರಿದ್ದರು.