ಬೆಳಗಾವಿ: `ಗ್ರಾಮೀಣ ಪ್ರದೇಶದಲ್ಲಿರುವ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ' ಎಂದು ಸಂಸದ ಸುರೇಶ ಅಂಗಡಿ ಹೇಳಿದರು.
ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ನಡೆದಿರುವ ಬೆಳಗಾವಿ ವಿಭಾಗ ಮಟ್ಟದ ಯುವಜನ ಮೇಳವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಇಂದಿನ ಸಾಂಪ್ರದಾಯಿಕ ಕಲೆಗಳು ಇಂದು ನಶಿಸಿ ಹೋಗುತ್ತಿವೆ. ಅವುಗಳ ರಕ್ಷಣೆ ಮಾಡುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾದ ಮಹತ್ತರ ಜವಾಬ್ದಾರಿಯು ಇಂದಿನ ಯುವಜನರ ಮೇಲಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಲು ಇಂಥ ವೇದಿಕೆಗಳು ಸಹಾಯವಾಗುತ್ತದೆ. ಬೆಳಕಿಗೆ ಬಾರದ ಅನೇಕ ಕಲಾವಿದರು ಇಂಥ ಯುವಜನ ಮೇಳದಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಸಹ ಹಮ್ಮಿಕೊಂಡಿವೆ. ಈ ಯೋಜನೆಗಳ ಲಾಭವನ್ನು ಯುವಜನರು ಪಡೆಯಬೇಕು ಎಂದರು.