ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯದ (ದಾರಿನಾಯಕನಪಾಳ್ಯ) ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ವಿತರಣೆ ಸಂದರ್ಭದಲ್ಲಿ ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ 1ನೇ ತರಗತಿ ಬಾಲಕಿ ಅನು (6) ಮಂಗಳವಾರ ಮಧ್ಯರಾತ್ರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು.
ಶೇ 80ರಷ್ಟು ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಕೊನೆಯುಸಿರೆಳೆದಳು.
ಬೆಂಗಳೂರಿನಿಂದ ಡಿ.ಪಾಳ್ಯದ ಸರ್ಕಾರಿ ಶಾಲಾ ಆವರಣಕ್ಕೆ ಬುಧವಾರ ಮಧ್ಯಾಹ್ನ ಆಂಬುಲೆನ್ಸ್ ಮೂಲಕ ಶವ ತರಲಾಯಿತು. ಪುತ್ರಿಯನ್ನು ಕಳೆದುಕೊಂಡ ನೋವು ಸಹಿಸಲಾಗದೆ ಕೂಲಿಕಾರ್ಮಿಕರಾದ ಅಶ್ವತ್ಥಪ್ಪ ಮತ್ತು ವೆಂಕಟಲಕ್ಷ್ಮಿ ದಂಪತಿ ಹಾಗೂ ಸಂಬಂಧಿಕರು ರೋದಿಸುತ್ತಿದ್ದರು. ಅನುವಿನ ಹಿರಿಯ ಸಹೋದರ ಆನಂದ್ ಕೂಡ ಅಳುತ್ತಿದ್ದ. ಘಟನೆ ನಡೆದ ಶಾಲಾ ಆವರಣದಲ್ಲಿಯೇ ಆಕೆಯ ಶವವನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇರಿಸಲಾಯಿತು.