ಬೆಂಗಳೂರು: `ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಉತ್ತಮವಾದುದನ್ನು ಸಾಧಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಬಿಲ್ಲವರೆಲ್ಲ ಒಂದಾಗಿ' ಎಂದು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ನಾರಾಯಣಗುರು ಮಠದ ರೇಣುಕಾನಂದ ಸ್ವಾಮೀಜಿ ಕರೆ ನೀಡಿದರು.
ಬಿಲ್ಲವ ಅಸೋಸಿಯೇಷನ್ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಅಸೋಸಿಯೇಷನ್ನಿನ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಎಲ್ಲರನ್ನೂ ಒಗ್ಗೂಡಿಸಬೇಕೆಂಬ ಆಶಯದಿಂದ ಕಾರ್ಯ ನಿರ್ವಹಿಸುತ್ತಿರುವ ಬಿಲ್ಲವ ಅಸೋಸಿಯೇಷನ್ನಿನ ಕಾರ್ಯ ಶ್ಲಾಘನೀಯವಾಗಿದೆ. ಇಂದಿನ ಯುಗದಲ್ಲಿ ಆಮೆಯಂತೆ ನಿಧಾನವಾಗಿ ಸಾಗಿದರೆ ಸಾಲದು. ಬದಲಿಗೆ ವೇಗವಾಗಿ ಸಂಚರಿಸಿ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ' ಎಂದರು.
`ಬಿಲ್ಲವರು ಸಂಘಟಿತರಾಗಬೇಕು. ಸಮಾಜದಲ್ಲಿ ಪರಿವರ್ತನೆಯನ್ನು ತರಲು ಬಿಲ್ಲವ ಸಮಾಜ ಪ್ರಯತ್ನ ನಡೆಸಬೇಕು' ಎಂದು ಹೇಳಿದರು.
ಬಿಲ್ಲವ ಅಸೋಸಿಯೇಷನ್ನಿನ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, `ಬಿಲ್ಲವ ಸಮಾಜದವರಾದ ನಾವು ಬಹುಸಂಖ್ಯಾತರಿದ್ದೇವೆ. ಆದರೆ, ನಾವು ಇದುವರೆಗೂ ಒಗ್ಗಟ್ಟಾಗಿಲ್ಲ. ಸಂಘಟನೆಯಾಗಿಲ್ಲ. ಆದ್ದರಿಂದ ಯಾವ ಪಕ್ಷಗಳು ನಮಗೆ ಉಮೇದುವಾರರನ್ನಾಗಿ ನಿಲ್ಲಿಸುವುದಿಲ್ಲ. ಇದರಿಂದಲೇ ನಾವು ರಾಜಕೀಯದಲ್ಲಿ ಯಾವ ಸ್ಥಾನವನ್ನು ಗಳಿಸಲು ಸಾಧ್ಯವಾಗಿಲ್ಲ. ರಾಜಕೀಯದಲ್ಲಿ ನಾವು ಇನ್ನೂ ನೆಲಮಟ್ಟದಲ್ಲಿದ್ದೇವೆ' ಎಂದರು.
`ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಬಲಿಷ್ಠ ಸಂಘಟನೆಯನ್ನು ಕಟ್ಟಲು ಬಿಲ್ಲವ ಅಸೋಸಿಯೇಷನ್ ಪ್ರಯತ್ನ ಪಡುತ್ತಿದೆ. ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಬಿಲ್ಲವ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಆನಂದ್ ಎನ್. ಸುವರ್ಣ, ಮಂಗಳೂರು ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ.ಸುವರ್ಣ, ಕರ್ನಾಟಕ ರಾಜ್ಯ ವಕೀಲರ ಮಾಜಿ ಉಪಾಧ್ಯಕ್ಷ ಟಿ.ನಾರಾಯಣ ಪೂಜಾರಿ, ಚಿತ್ರ ನಿರ್ದೇಶಕ ಸದಾನಂದ ಸುವರ್ಣ ಮತ್ತಿತರರು ಭಾಗವಹಿಸಿದ್ದರು.