ಪೋಖರಣ್(ಪಿಟಿಐ): ಜೆಟ್ ವಿಮಾನಗಳು, ಹೆಲಿಕಾಪ್ಟರ್ಗಳು ಹಾಗೂ ಭಾರತೀಯ ವಾಯುದಳದ ವಿಮಾನಗಳು, ಹೊನಲು- ಬೆಳಕಿನ ಅಭ್ಯಾಸದ ವೇಳೆ, ತಮ್ಮ ಕಾರ್ಯಾಚರಣೆ ಮತ್ತು ಕರಾರುವಕ್ಕಾದ ದಾಳಿ ಸಾಮರ್ಥ್ಯವನ್ನು ರಾಜಸ್ತಾನದ ಥಾರ್ ಮರುಭೂಮಿಯಲ್ಲಿ ಶುಕ್ರವಾರ ಸಂಜೆ ಪ್ರದರ್ಶಿಸಿದವು.
ಜೈಸಲ್ಮೇರ್ ಬಳಿ ಭಾರತೀಯ ವಾಯುದಳ (ಐಎಎಫ್) ಹಮ್ಮಿಕೊಂಡಿದ್ದ ಅಭ್ಯಾಸದ ವೇಳೆ, ಆಕಾಶದಿಂದ ನೆಲಕ್ಕೆ ಚಿಮ್ಮುವ ಶಸ್ತ್ರಾಸ್ತ್ರ ದಾಳಿ ಹಾಗೂ ಕರಾರುವಾಕ್ಕಾದ ಬಾಂಬ್ ದಾಳಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ವೀಕ್ಷಿಸಿದರು. `ಸೇನಾಪಡೆಗಳ ದಂಡನಾಯಕರೂ ಆಗಿರುವ ರಾಷ್ಟ್ರಪತಿ ಸಮ್ಮುಖದಲ್ಲಿ ನಡೆದ ಮಾನವ, ಯಂತ್ರ, ಆಯುಧಗಳು ಹಾಗೂ ತಂತ್ರಜ್ಞಾನದ ಮುಖಾಮುಖಿ ಪ್ರದರ್ಶನ ಇದು' ಎಂದು ಭಾರತೀಯ ವಾಯು ಪಡೆ (ಐಎಎಫ್)ಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ. ಬ್ರೌನ್ ಹೇಳಿದರು.
ಹಾರುವ ಯಂತ್ರಗಳ ಮೇಲಿನ ತಮ್ಮ ಅಮೋಘ ನಿಯಂತ್ರಣವನ್ನು ತೋರಿಸಿದ ಪೈಲಟ್ಗಳು, ತರಬೇತುದಾರರ ಹೊರತಾಗಿಯೂ ಎಸ್ಯು-30, ಎಂಕೆಐ, ಮಿರಾಜ್ 2000, ಜಾಗ್ವಾರ್, ಮಿಗ್-21, ಮಿಗ್-27, ಮಿಗ್-29 ಗಳಂತಹ ಪ್ರಮುಖ ಸಮರ ನೌಕೆಗಳ ಮೇಲಿರುವ ಹಿಡಿತವನ್ನು ಪ್ರದರ್ಶಿಸಿದರು. ರಕ್ಷಣಾ ಸಚಿವ ಎ.ಕೆ.ಆಂಟನಿ, ರಾಜಸ್ತಾನದ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸೇರಿದಂತೆ ಅನೇಕರು ಇದಕ್ಕೆ ಸಾಕ್ಷಿಯಾದರು.