ಚಿತ್ರದುರ್ಗ: ಯಾವುದೇ ದೇಶ ಆರ್ಥಿಕವಾಗಿ ವಿಕಾಸಗೊಳ್ಳಲು ಹಾಗೂ ಸಾಮಾಜಿಕ ಪರಿವರ್ತನೆಯಾಗಬೇಕಾದಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಅಪಾರವಾಗಿದೆ ಎಂದು ಸರ್ಕಾರಿ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್. ಲಿಂಗಪ್ಪ ತಿಳಿಸಿದರು.
ಜಿಲ್ಲಾ ಸಾಂಖ್ಯಿಕ ಇಲಾಖೆ ವತಿಯಿಂದ ಗುರುವಾರ ನಗರದ ಎಸ್ಜೆಎಂ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಸಾಂಖ್ಯಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಯೋಜನೆಗಳನ್ನು ರೂಪಿಸುವಲ್ಲಿ ಅಂಕಿಅಂಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಬಡತನ, ದಾರಿದ್ರ್ಯ, ಬಂಡವಾಳದ ವ್ಯತ್ಯಾಸ ಇವೆಲ್ಲವುಗಳ ಹಿನ್ನೆಲೆಯಲ್ಲಿ ಅಂಕಿ-ಸಂಖ್ಯೆಗಳ ಮಾಹಿತಿ ಬಹಳ ಮುಖ್ಯವಾಗಿವೆ ಎಂದು ತಿಳಿಸಿದರು.
ದೇಶದ ಸಮಗ್ರ ಪ್ರಗತಿಯಲ್ಲಿ ಅಂಕಿ-ಅಂಶಗಳು ಬೆಳಕನ್ನು ನೀಡುತ್ತಿವೆ ಎಂದು ತಿಳಿಸಿದ ಅಮರ್ಥ್ಯಸೇನ್ ಆರ್ಥಿಕ ಚಿಂತಕರಾಗಿದ್ದು, ಯಾವುದೇ ಆರ್ಥಿಕ ಬೆಳವಣಿಗೆಯಲ್ಲಿ ಅಂಕಿ- ಸಂಖ್ಯೆಗಳೇ ಆಧಾರವೆಂದು ತೋರಿಸಿದರು. ಸಾಂಖ್ಯಿಕ ಇಲಾಖೆ ನಮ್ಮೆಲ್ಲ ಕ್ಷೇತ್ರದ ಬೆಳವಣಿಗೆಗೆ ಮಾಹಿತಿ ನೀಡುವಂತಹ ವಿಶಿಷ್ಟವಾದ ಇಲಾಖೆ ಎಂದು ನುಡಿದರು.
ಪ್ರೊ.ಕೆ. ರಾಮರಾವ್ ಮಾತನಾಡಿ, ಸಮಾಜದ ಅಭಿವೃದ್ದಿಗೆ ಬೇಕಾಗುವ ಯೋಜನೆಗಳನ್ನು ರೂಪಿಸಬೇಕಾದರೆ ಅದರ ಹಿಂದೆ ಸಂಖ್ಯಾಶಾಸ್ತ್ರದ ಕೊಡುಗೆ ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಎಸ್ಜೆಎಂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ. ರಂಗಸ್ವಾಮಿ, ಸಹಾಯಕ ಸಾಂಖ್ಯಿಕ ಅಧಿಕಾರಿ ರಾಜಣ್ಣ, ಜಿಲ್ಲಾ ವಾರ್ತಾಧಿಕಾರಿ ಎಸ್. ಮಹೇಶ್ವರಯ್ಯ, ಪ್ರೊ.ಗಂಗಾಧರಭಟ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಚಂದ್ರಪ್ಪ ಉಪಸ್ಥಿತರಿದ್ದರು. ಆಶಾ ವಂದಿಸಿದರು.
ಸಂತಾಪ: ಮಾಜಿ ಸಚಿವ ಕೆ.ಎಚ್. ರಂಗನಾಥ್ ಅವರ ನಿಧನಕ್ಕೆ ಚಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.