ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಬಾಬಾ ಕೋಣೆಯಲ್ಲಿ ಕಂಡ ಸಂಪತ್ತು

Last Updated 17 ಜೂನ್ 2011, 19:30 IST
ಅಕ್ಷರ ಗಾತ್ರ

ಪುಟ್ಟಪರ್ತಿ (ಪಿಟಿಐ): ತೀವ್ರ ಕುತೂಹಲ ಮೂಡಿಸಿದ್ದ ದಿವಂಗತ ಸಾಯಿಬಾಬಾ ಅವರ ಮುಚ್ಚಿದ್ದ ಖಾಸಗಿ ಕೊಠಡಿ `ಯಜುರ್ ಮಂದಿರ~ದ ರಹಸ್ಯಕ್ಕೆ ಶುಕ್ರವಾರ ಸಂಜೆ ತೆರೆಬಿತ್ತು. ಕೊಠಡಿಯಲ್ಲಿ 98 ಕೆ.ಜಿ. ಬಂಗಾರ, 307 ಕೆ.ಜಿ. ಬೆಳ್ಳಿ ಮತ್ತು 11.56 ಕೋಟಿ ರೂಪಾಯಿ ನಗದು ಇತ್ತು.

ಪ್ರಶಾಂತಿ ನಿಲಯಮ್‌ನ ಈ ಕೊಠಡಿಯನ್ನು ಗುರುವಾರ ತೆರೆಯಲಾಯಿತು. ಅಲ್ಲಿದ್ದ ಚಿನ್ನ, ಬೆಳ್ಳಿ ಮತ್ತು ನಗದನ್ನು ಲೆಕ್ಕ ಹಾಕಲು 20 ಜನರಿಗೆ 36 ಗಂಟೆಗಳ ಕಾಲ ಹಿಡಿಯಿತು. ಅಸ್ವಸ್ಥ ಸಾಯಿಬಾಬಾ ಅವರು ಮಾರ್ಚ್ 28ರಂದು ಆಸ್ಪತ್ರೆ ಸೇರಿದಂದಿನಿಂದ ಅದರ ಬಾಗಿಲು ಮುಚ್ಚಿಯೇ ಇತ್ತು.

ಸತ್ಯ ಸಾಯಿ ಕೇಂದ್ರೀಯ ಟ್ರಸ್ಟ್ ಗುರುವಾರ ಮತ್ತು ಶುಕ್ರವಾರ ಕೊಠಡಿಯಲ್ಲಿನ ವಸ್ತುಗಳ ಪಟ್ಟಿ ಸಿದ್ಧಪಡಿಸಿ, ಮೌಲ್ಯವನ್ನು ಅಂದಾಜಿಸಿತು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎ.ಪಿ.ಮಿಶ್ರಾ ಮತ್ತು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವೈದ್ಯನಾಥ ಅವರ ಸಮ್ಮುಖದಲ್ಲಿ ಈ ಕಾರ್ಯ ನಡೆಯಿತು.

ಚಿನ್ನ, ಬೆಳ್ಳಿ ಮತ್ತಿತರ ಆಭರಣಗಳ ಮೌಲ್ಯ ನಿರ್ಧರಿಸುವಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ನೆರವು ನೀಡಿದರು ಎಂದು ಟ್ರಸ್ಟ್ ಸದಸ್ಯರೂ ಆದ ಬಾಬಾ ಅವರ ಸೋದರಳಿಯ ಆರ್.ಜೆ.ರತ್ನಾಕರ್ ತಿಳಿಸಿದರು.

ಇದಕ್ಕೆ ಮುನ್ನ, ಗುರುವಾರ, ಮಂದಿರವನ್ನು ತೆರೆದ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯರಾದ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎನ್.ಭಗವತಿ, ಕಾರ್ಯದರ್ಶಿ ಕೆ.ಚಕ್ರವರ್ತಿ, ಇತರ ಸದಸ್ಯರಾದ ಇಂದೂಲಾಲ್ ಷಾ, ವೇಣು ಶ್ರೀನಿವಾಸನ್ ಹಾಗೂ ಬಾಬಾ ಅವರಿಗೆ ಆಪ್ತರಾಗಿದ್ದ ಸತ್ಯಜಿತ್ ಮತ್ತಿತರರು ಇದ್ದರು. ಐವರು ಟ್ರಸ್ಟಿಗಳು ಹಾಗೂ ಪಿ.ಎನ್.ಭಗವತಿ ಸೇರಿದಂತೆ ಇಬ್ಬರು ಆಡಳಿತ ಮಂಡಲಿಯ ಸದಸ್ಯರು ಸ್ವತಂತ್ರ ಸಾಕ್ಷಿಗಳಾಗಿ ಹಾಜರಿದ್ದರು ಎಂದು ರತ್ನಾಕರ್ ತಿಳಿಸಿದರು.

ಬಾಬಾ ಅವರಿಗೆ ಭಕ್ತರು ಕೊಡುಗೆಯಾಗಿ ನೀಡಿದ್ದ ವಸ್ತುಗಳು ಕೊಠಡಿಯಲ್ಲಿದ್ದವು. ಆ ಎಲ್ಲ ವಸ್ತುಗಳ ಬಗ್ಗೆ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂಬ ಉದ್ದೇಶ ನಮ್ಮದಾಗಿತ್ತು. ಹೀಗಾಗಿಯೇ ಎಲ್ಲವನ್ನೂ ಮುಕ್ತ ವಾತಾವರಣದಲ್ಲಿ ಬಹಿರಂಗಗೊಳಿಸಲಾಗಿದೆ ಎಂದು ಹೇಳಿದರು.

ಮಂದಿರದಲ್ಲಿದ್ದ ನಗದನ್ನು ಪ್ರಶಾಂತಿ ನಿಲಯಮ್‌ದ ಎಸ್‌ಬಿಐ ಶಾಖೆಯ ಟ್ರಸ್ಟ್ ಖಾತೆಗೆ ಜಮಾ ಮಾಡಲಾಗಿದೆ.
ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಯಜುರ್ ಮಂದಿರದೊಳಗಿನ ಮೌಲ್ಯಯುತ ವಸ್ತುಗಳನ್ನು ಅಜ್ಞಾತ ಸ್ಥಳಕ್ಕೆ ರಹಸ್ಯವಾಗಿ ಸ್ಥಳಾಂತರಿಸಲಾಗಿದೆ ಎಂದು ವದಂತಿಗಳು ದಟ್ಟವಾಗಿ ಹಬ್ಬಿದ್ದವು.

ಆದರೆ ಸತ್ಯ ಸಾಯಿ ಉನ್ನತ ಶಿಕ್ಷಣ ಕೇಂದ್ರದ ಕುಲಪತಿಯವರೂ ಆದ ಭಗವತಿ ಮತ್ತು ಟ್ರಸ್ಟ್ ಸದಸ್ಯ ವೇಣು ಶ್ರೀನಿವಾಸನ್ ಅವರು ಆ ವದಂತಿಗಳನ್ನೆಲ್ಲಾ ಅಲ್ಲಗಳೆದಿದ್ದರು.

ಅನುಯಾಯಿಗಳು ಹಾಗೂ ಸಾರ್ವಜನಿಕರಲ್ಲಿ ಶಂಕೆಗೆ ಆಸ್ಪದ ನೀಡಬಾರದೆಂದು ಸತ್ಯ ಸಾಯಿ ಕೇಂದ್ರ ಟ್ರಸ್ಟ್‌ನ ಸದಸ್ಯರು ಜೂನ್ 15ರ ಸಭೆಯಲ್ಲಿ ನಿರ್ಧರಿಸಿದ್ದರು. ಅದರಂತೆ ಇಲ್ಲಿನ ಎಸ್‌ಬಿಐ ಶಾಖೆಯಲ್ಲಿ ಸುರಕ್ಷಿತವಾಗಿ ಇಡಲಾಗಿದ್ದ ಕೀಲಿ ಕೈಯನ್ನು ಗುರುವಾರ ಪಡೆದು ಮಂದಿರವನ್ನು ತೆರೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT