ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿಬಾಬಾ ಮಂದಿರಗಳಲ್ಲಿ ಜನ ಜಾತ್ರೆ

ಗುರು ಪೂರ್ಣಿಮೆಗೆ ಮಳೆ ಸಿಂಚನದ ಸಂಭ್ರಮ
Last Updated 23 ಜುಲೈ 2013, 6:35 IST
ಅಕ್ಷರ ಗಾತ್ರ

ತುಮಕೂರು: ಗುರು ಪೂರ್ಣಿಮೆಗೆ ಮೇಘರಾಜ ಕೂಡ ಮಳೆ ಸಿಂಚನದ ಮೂಲಕ ಗೌರವ ಸಲ್ಲಿಸಿದಂತೆ ಸೋಮವಾರ ಕಂಡುಬಂತು. ಮೋಡ ಮುಚ್ಚಿದ, ಹನಿಹನಿ ಮಳೆಯ ನಡುವೆ ಭಕ್ತರು ನಗರದ ಶಿರಡಿ ಸಾಯಿ ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.

ರಾಮಕೃಷ್ಣ ನಗರ, ಬೆಳಗುಂಬ ರಸ್ತೆ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಭಕ್ತರನ್ನು ನಿಯಂತ್ರಿಸಲು ಮರಗಳನ್ನು ಬಳಸಿ ಸಾಲುಗಳನ್ನು ಕಟ್ಟಲಾಗಿತ್ತು. ಪೊಲೀಸರು ಈ ಎರಡೂ ದೇವಸ್ಥಾನಗಳಲ್ಲಿ ಶ್ವಾನ ದಳದೊಂದಿಗೆ ತೆರಳಿ ತಪಾಸಣೆ ನಡೆಸಿತು.

ಬಾಬಾ ದರ್ಶನ ಪಡೆಯುತ್ತಲೇ ಭಕ್ತರು ಭಾವಪರವಶರಾಗುತ್ತಿದ್ದ ದೃಶ್ಯ ಕಂಡು ಬಂತು. ಅಮರಜ್ಯೋತಿ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಕಾಕಡಾರತಿ, ಕ್ಷೀರಾಭಿಷೇಕ, ಸಾಮೂಹಿಕ ಸಾಯಿ ಸತ್ಯನಾರಾಯಣ ಪೂಜೆ ನೆರವೇರಿತು.

ಅಮರಜ್ಯೋತಿ ನಗರದ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಪಲ್ಲಕಿ ಉತ್ಸವ ಗಮನ ಸೆಳೆಯಿತು. ಸಂಸದ ಜಿ.ಎಸ್.ಬಸವರಾಜ್, ಕೆಜೆಪಿ ಮುಖಂಡ ಜ್ಯೋತಿಗಣೇಶ್ ಇತರರು ಪಾಲ್ಗೊಂಡಿದ್ದರು.

ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರು ಬಾಬಾ ದರ್ಶನ ಪಡೆದರು. ಸಾಯಿ ಬಾಬಾ ಮೂರ್ತಿಗೆ ಭಕ್ತರು ನೇರವಾಗಿ ಕ್ಷೀರಾಭಿಷೇಕ ಮಾಡುವ ವ್ಯವಸ್ಥೆ ಮಾಡಿದ್ದು ಭಕ್ತರಲ್ಲಿ ಸಂತಸ ಇಮ್ಮಡಿಗೊಳಿಸಿತ್ತು. ಸಾಯಿ ಭಕ್ತರು ಭಜನೆಯಲ್ಲಿ ಪಾಲ್ಗೊಂಡರು. ಭಜನೆ ನಂತರ ವಿವಿಧ ಸಾಂಸ್ಕೃತಿಕ ಕಲಾತಂಡಗಳು, ವಾದ್ಯಗಳ ಸಮ್ಮಿಳಿತದೊಂದಿಗೆ ಬಾಬಾ ಪಲ್ಲಕ್ಕಿ ಉತ್ಸವ ನಡೆಯಿತು.

ಬೆಳಗುಂಬ ರಸ್ತೆಯ ಶಿರಡಿ ಸಾಯಿಬಾಬಾ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಆಚರಣೆ ವಿಶೇಷವಾಗಿತ್ತು. ಟ್ರಸ್ಟ್ ವತಿಯಿಂದ ಶಿವಸೇವಾಶ್ರಮದ ಮಕ್ಕಳಿಗೆ ಉಚಿತ ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಯಿತು ಎಂದು ಟ್ರಸ್ಟ್ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ಸ್ಯಾಕ್ಸಾಫೋನ್ ವಾದನ ಗಮನ ಸೆಳೆಯಿತು.

ಚಿನ್ನದ ಸಿಂಹಾಸನ, ಪ್ರಭಾವಳಿಯ ನಡುವೆ ಸಾಯಿಬಾಬಾ ಮೂರ್ತಿ ಕಂಗೊಳಿಸಿತು. ಭಕ್ತರಿಗೆ ಜಿಲೇಬಿ, ಲಾಡು ಸೇರಿದಂತೆ ಪ್ರಸಾದ ನೀಡಲಾಯಿತು.
ಜಯನಗರ ಶಿರಡಿ ಸಾಯಿ ಬಾಬಾ ಮಂದಿರದ ವತಿಯಿಂದ ಬಾಬಾ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT