ಬೆಂಗಳೂರು: `ಸಾರಿಗೆ ಇಲಾಖೆು ನಿವೃತ್ತ ನೌಕರರಿಗೆ ರಾಜ್ಯದಾದ್ಯಂತ ಓಡಾಡಲು ಉಚಿತ ಬಸ್ ಪಾಸ್ ನೀಡಬೇಕು' ಎಂದು ಒತ್ತಾಯಿಸಿ ಶಾಂತಿನಗರದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಎದುರು ಸಾರಿಗೆ ಸಂಸ್ಥೆಗಳ ನೌಕರರ ಮತ್ತು ನಿವೃತ್ತ ನೌಕರರ ಸಂಘಗಳ ಕ್ಷೇಮಾಭಿವೃದ್ದಿ ಮಹಾಮಂಡಳದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಮಹಾಮಂಡಳದ ಉಪಾಧ್ಯಕ್ಷ ಎನ್.ವಿ.ಜೈಶಂಕರ ರೆಡ್ಡಿ ಮಾತನಾಡಿ, `ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಸುಮಾರು 20 ರಿಂದ 40 ವರ್ಷ ಕೆಲಸ ಮಾಡಿದ ಕಾರ್ಮಿಕರಿಗೆ ಸರ್ಕಾರ ಯಾವುದೇ ಸೌಲಭ್ಯಗಳನ್ನು ನೀಡದೇ ಕೈ ತೊಳೆದುಕೊಂಡಿದೆ. ಅನೇಕ ಬಾರಿ ಮುಖ್ಯಮಂತ್ರಿ, ಸಾರಿಗೆ ಸಚಿವರು ಸೇರಿದಂತೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ' ಎಂದರು.
`ನಮಗೆ ಉಚಿತವಾಗಿ ಬಸ್ ಪಾಸನ್ನು ನೀಡಿದರೆ ಸಾರಿಗೆ ಇಲಾಖೆಗೆ ಯಾವುದೇ ನಷ್ಟವಾಗುವುದಿಲ್ಲ. ರೈಲ್ವೆ ಇಲಾಖೆ ಸೇರಿದಂತೆ ಪಕ್ಕದ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇಲಾಖೆಗಳ ನಿವೃತ್ತ ನೌಕರರಿಗೆ ಉಚಿತ ಪಾಸನ್ನು ನೀಡುತ್ತಿವೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಪಾಸ್ ನೀಡಬೇಕು. ಇಲ್ಲವಾದರೆ ಅನಿರ್ಧಿಷ್ಟ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು' ಎಂದರು.