ಸಕಲೇಶಪುರ: ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದ ಐತಿಹಾಸಿಕ ಕುದುರಂಗಿ ವೀರಭದ್ರೇಶ್ವರಸ್ವಾಮಿ ದೇವಸ್ಥಾನಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸೆ ಬಸ್ ಡಿಕ್ಕಿ ಹೊಡೆದು ಸುಮಾರು 15 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕಟ್ಟಡ ನೆಲಸಮವಾಗಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಪಟ್ಟಣಕ್ಕೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ವೇಗವಾಗಿ ಹಿಂಬದಿಗೆ ಬಂದು ದೇವಸ್ಥಾನದ ಮಹಾದ್ವಾರಕ್ಕೆ ಡಿಕ್ಕಿ ಹೊಡೆದಿದೆ. ಆಕರ್ಷಕವಾಗಿದ್ದ 50 ವರ್ಷಗಳ ಕಟ್ಟಡ ಮೇಲ್ಚಾವಣಿ, ಗೋಪುರ ಕಳಸ ಎಲ್ಲವೂ ನೆಲಸಮವಾಗಿದೆ. ಗರ್ಭಗುಡಿ ಹಾಗೂ ಮುಂಭಾಗದ ದ್ವಾರದ ನಡುವೆ ಸುಮಾರು 15 ಅಡಿಗಳ ಅಂತರವಿದ್ದರೂ, ಕಬ್ಬಿಣದ ಚಪ್ಪರದ ತೊಲೆಗಳು ಗರ್ಭಗುಡಿಗೆ ತಗುಲಿ ಹೆಂಚುಗಳು ಒಡೆದುಹೋಗಿವೆ.
ಸುಮಾರು 50 ಅಡಿಗೂ ಹೆಚ್ಚು ಉದ್ದ ಗೋಡೆ, ಮೇಲ್ಚಾವಣಿ, ಗೋಪುರ ಸೇರಿದಂತೆ ರೂ. 15 ಲಕ್ಷ ಹೆಚ್ಚು ಹಾನಿ ಉಂಟಾಗಿದ್ದು, ದೇವಾಲಯದ ಮೂಲ ಸ್ವರೂಪವೇ ನಾಶಗೊಂಡಿದೆ.
ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಪಲ್ಲವಿ ಆಕೃತಿ, ತಹಶೀಲ್ದಾರ್ ಚಂದ್ರಮ್ಮ, ಡಿವೈಎಸ್ಪಿ ಕವಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಸ್ಥಾನ ಧ್ವಂಸಗೊಂಡಿದ್ದರೂ, ಡಿಪೋ ವ್ಯವಸ್ಥಾಪಕ ಹೆಬ್ಬಾರ್ ಸ್ಥಳಕ್ಕೆ ಭೇಟಿ ನೀಡಲು ವಿಳಂಬ ಮಾಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಶನಿವಾರ ಬೆಳಿಗ್ಗೆ 10ಘಂಟೆಗೆ ಸ್ಥಳಕ್ಕೆ ಭೇಟಿ ನೀಡಿದ ಡಿಪೋ ವ್ಯವಸ್ಥಾಪಕರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಮುಜರಾಯಿ ಇಲಾಖೆಗೆ ಸೇರಿರುವ ದೇವಸ್ಥಾನವನ್ನು ಕೂಡಲೇ ಈ ಹಿಂದಿನ ಸ್ವರೂಪದಂತೆ ಜೀರ್ಣೋದ್ಧಾರ ಮಾಡ ಬೇಕು ಎಂದು ಭಕ್ತರು ಒತ್ತಾಯಿಸಿದರು.
ದೇವಸ್ಥಾನ ಮಹಾದ್ವಾರ ಈ ಹಿಂದಿನ ಶೈಲಿಯಲ್ಲಿಯೇ ಪುನಃ ನಿರ್ಮಿಸಲು ಕೂಡಲೆ ಅಂದಾಜು ಪಟ್ಟಿ ಸಿದ್ದಗೊಳಿಸಿ ಡಿಸಿಗೆ ಕಳುಹಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.