ಮಂಗಳೂರು: ಗ್ರಾಮೀಣ ಭಾಗದ ಜನರಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಗದಗ ಮಾದರಿಯ ಒಂದು ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಭಾನುವಾರ ರಾಮಕೃಷ್ಣ ಮಠದಲ್ಲಿ ‘ವಿವೇಕ ಸಂಸ್ಮರಣ’ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಷ್ಟ್ರಪತಿ ಮತ್ತು ಪ್ರಧಾನಿ ಕುಡಿಯುವ ನೀರು ಯಾವ ಗುಣಮಟ್ಟದಲ್ಲಿ ಇರುತ್ತದೋ ಅದೇ ಗುಣಮಟ್ಟದ ನೀರು ಗ್ರಾಮೀಣ ಜನತೆಗೂ ಸಿಗಬೇಕು. ಆ ಹಿನ್ನೆಲೆಯಲ್ಲಿ ಹೊಸ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗುವುದು.
ಈಗಾಗಲೇ ರಾಜ್ಯದಲ್ಲಿ ಐದು ಸಾವಿರ ಹಳ್ಳಿಗಳ ಕುಡಿಯುವ ನೀರು ಆರ್ಸೆನಿಕ್, ಫ್ಲೋರೈಡ್ ಮತ್ತು ನೈಟ್ರೇಟ್ನಿಂದಾಗಿ ಕಲುಷಿತವಾಗಿದೆ. ಆದ್ದರಿಂದ ಆದ್ಯತೆಯ ಮೇರೆಗೆ ಆಯ್ದ ಹಳ್ಳಿಗಳಲ್ಲಿ ಸ್ಥಾಪಿಸಲಾಗುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಫ್ಲೋರೈಡ್ ಮತ್ತು ಆರ್ಸೆನಿಕ್ ಅಂಶಗಳನ್ನು ಬೇರ್ಪಡಿಸಿ ಕುಡಿಯಲು ಯೋಗ್ಯ ಮಾಡಿ ವಿತರಿಸಲಾಗುವುದು ಎಂದರು.
ಪ್ರತಿ ಘಟಕ ಸ್ಥಾಪನೆಗೆ 10 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಆದರೆ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿ ಕಟ್ಟಡಗಳಲ್ಲಿ ಜಾಗ ದೊರೆತರೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಬಹುದು ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆ ಹೊಸ 15 ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಶುದ್ಧ ಕುಡಿಯುವ ನೀರು ಪೂರೈಕೆ, ಮನೆಗೊಂದು ಶೌಚಾಲಯ, ಹೊಲದಿಂದ ಹೊಲಕ್ಕೆ, ಹೊಲದಿಂದ ಗ್ರಾಮಕ್ಕೆ, ಗ್ರಾಮದಿಂದ ಪಟ್ಟಣಕ್ಕೆ ರಸ್ತೆ ನಿರ್ಮಾಣ, ಗ್ರಾಮಗಳಲ್ಲಿ ಮಕ್ಕಳಿಗಾಗಿ ಆಟದ ಮೈದಾನ ನಿರ್ಮಾಣ, ಸ್ಮಶಾನ, ಕುರಿ ಮತ್ತು ದನದ ದೊಡ್ಡಿ, ಬಯಲು ರಂಗ ಮಂದಿರ ನಿರ್ಮಾಣ ಮುಂತಾದ ಯೋಜನೆಗಳನ್ನು ಇಲಾಖೆ ಜಾರಿ ಮಾಡಲಿದೆ ಎಂದು ಹೇಳಿದರು.
‘ನಮ್ಮೂರ ಕೆರೆ’ಯೋಜನೆ ಮೂಲಕ 18 ಸಾವಿರ ಕೆರೆಗಳನ್ನು ಪುನಶ್ಚೇತನ ಮಾಡುವ ಉದ್ದೇಶವಿದ್ದು 12 ಸಾವಿರ ಕೆರೆಗಳ ಕೆಲಸ ಸದ್ಯದಲ್ಲೇ ಆರಂಭಿಸಲಾಗುವುದು. ಇದೇ ವರ್ಷದಲ್ಲಿ ಸುಮಾರು 6 ಸಾವಿರ ಕೆರೆಗಳ ಕಾಮಗಾರಿ ಮುಗಿಸಲಾಗುವುದು ಎಂದು ಹೇಳಿದರು.
ನಿವೇಶನ ನೋಂದಣಿ ಸಮಸ್ಯೆ: 21ಕ್ಕೆ ಸಭೆ
ಗ್ರಾಮೀಣ ಪ್ರದೇಶಗಳಲ್ಲಿ ಮನೆ ಕಟ್ಟಿಸಿಕೊಳ್ಳಲು ನಿವೇಶನ ನೋಂದಣಿಯಲ್ಲಿ ಎನ್ಎ, ಫಾರಂ ನಂ 9, ಫಾರಂ ನಂ 11 ಸಮಸೆ್ಯಗಳು ಎದುರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದೇ 21ರಂದು ಈ ಸಮಸ್ಯೆ ಬಗೆಹರಿಸುವ ಸಲುವಾಗಿ ಸಭೆಯೊಂದನ್ನು ಕರೆಯಲಾಗಿದ್ದು, ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಸಚಿವರು ಕಾಂಗೆ್ರಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.
ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ 2 ಲಕ್ಷ ಗ್ರಾಮೀಣ ನಿರುದ್ಯೋಗಿ ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಇದೆ, ರಾಜ್ಯದಲ್ಲಿ 56 ಲಕ್ಷ ಕುಟುಂಬಗಳಲ್ಲಿ ಶೌಚಾಲಯಗಳಿಲ್ಲ, ಮೊದಲ ಹಂತದಲ್ಲಿ 6 ಲಕ್ಷ ಶೌಚಾಲಯ ನಿರ್ಮಿಸಲಾಗುವುದು, ಈಗಾಗಲೇ 1 ಲಕ್ಷ ಶೌಚಾಲಯಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ವಾರ್ಡ್ ಸಭೆಗಳು, ಗ್ರಾಮ ಸಭೆಗಳನ್ನು ನಡೆಸುವ ಮೂಲಕ ನಿಜವಾದ ಅರ್ಥದಲ್ಲಿ ಗಾ್ರಮ ಸ್ವರಾಜ್ಯಕ್ಕೆ ಸರ್ಕಾರ ಕೇವಲ 4 ತಿಂಗಳಲ್ಲೇ ಪ್ರಯತ್ನ ಆರಂಭಿಸಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.