ವಿಜಾಪುರ: ನಗರದಲ್ಲಿ ನಡೆಯಲಿರುವ 79ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೋ.ಚೆನ್ನಬಸಪ್ಪ ಅವರನ್ನು ಬೆಂಗಳೂರಿನ ರಾಜಾಜಿನ ಗರದಲ್ಲಿರುವ ಅವರ ನಿವಾಸದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಪರವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಸಂಗಮೇಶ ಬಾದವಾಡಗಿ ಮುಂತಾದವರು ಅವರನ್ನು ಸನ್ಮಾನಿಸಿದರು.
`ನಾನು 19ನೇ ವಯಸ್ಸಿನವನಿರು ವಾಗಲೇ ವಿಜಾಪುರದಲ್ಲಿ ಲೇಖನ ಬರೆದಿದ್ದೆ. ಅದನ್ನು ಪತ್ರಿಕೆಯವರು ಪ್ರಕಟಿಸಿ ನನ್ನ ಸಾಹಿತ್ಯ ಕೃಷಿಗೆ ಇಂಬು ನೀಡಿದ್ದರು. ಆ ಸವಿನೆನಪು ನಾನೆಂದಿಗೂ ಮರೆಯಲಾರೆ' ಎಂದು ಅವರು ಹೇಳಿದರು.
`1926ರಲ್ಲಿ ಬಳ್ಳಾರಿಯಲ್ಲಿ ಜರುಗಿದ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಜಾಪುರದ ಡಾ.ಫ.ಗು. ಹಳಕಟ್ಟಿ ಆಯ್ಕೆಯಾಗಿದ್ದರು. ಪ್ರಸ್ತುತ ಬಳ್ಳಾರಿ ಜಿಲ್ಲೆಯವನಾದ ನಾನು ವಿಜಾಪುರ ಸಮ್ಮೇಳನದ ಅಧ್ಯಕ್ಷನಾಗಿದ್ದೇನೆ' ಎಂದು ಕೋ.ಚೆನ್ನಬಸಪ್ಪ ಹೇಳಿದರು.