ಮಳವಳ್ಳಿ: ನಾನು ಮುಖ್ಯಮಂತ್ರಿಯಾಗುವುದು ಸ್ವಾರ್ಥ ಹಾಗೂ ಸಂಪತ್ತು ಲೂಟಿ ಮಾಡಿ ಆಸ್ತಿ ಸಂಪಾದಿಸಲು ಅಲ್ಲ, ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ಜನರ ಏಳಿಗೆಗಾಗಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾ ಕನಕ ಯುವ ಸಮಿತಿ ವತಿಯಿಂದ ತಾಲ್ಲೂಕಿನ ಕಿರುಗಾವಲು ಹೋಬಳಿ ಅಣಸಾಲೆಯಲ್ಲಿ ಭಾನುವಾರ ನಡೆದ ಭಕ್ತ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅವರ ಪಾಲು ಅವರ ಪಾಲಾಗಬೇಕು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ನೀತಿಯಲ್ಲಿ ಸಂಪತ್ತು ಸಿಗಬೇಕು ಎಂದು ಅವರು ಹೇಳಿದರು.
ಬಸವಣ್ಣ-ಕನಕದಾಸ-ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ದೇಶದಲ್ಲಿ ಹಲವು ದಾರ್ಶನಿಕರು, ತ್ಯಾಗ ಜೀವಿಗಳು ಜಾತ್ಯತೀತತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ್ದರು. ಈ ತತ್ವಕ್ಕೆ ಬದ್ಧರಾಗಿರುವವರು ಅಧಿಕಾರ ನಡೆಸಿ ಸಂವಿಧಾನವನ್ನು ಜಾರಿಗೊಳಿಸಿದಾಗ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ ಎಂದು ತಿಳಿಸಿದರು.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಳೆದ 25 ವರ್ಷಗಳಿಂದಲೂ ನಾನು ಇರುವ ಪಕ್ಷಕ್ಕೆ ಬೆಂಬಲ ಸೂಚಿಸಿ ಅಭಿಮಾನ ಪ್ರದರ್ಶಿಸಿದ್ದೀರಿ ಎಂದು ಕೃತಜ್ಞತೆ ಸಲ್ಲಿಸಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಕೆಪಿಸಿಸಿ ಸದಸ್ಯ ಎಸ್.ಶಿವಣ್ಣ, ವೈ. ಎಸ್.ಸಿದ್ದರಾಜು, ಡಾ.ಮೂರ್ತಿ, ರಾಮಚಂದ್ರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಜಕ್ರಿಯಾಖಾನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಿತ್ರ ಶಿವಮಾದೇಗೌಡ, ಮುಖಂಡರಾದ ಚನ್ನೇಗೌಡ, ಜಿಲ್ಲಾ ಕನಕ ಯುವ ಸಮಿತಿ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಶಿವಮೂರ್ತಿ ಹಾಗೂ ಪದಾಧಿಕಾರಿಗಳು ಇದ್ದರು.