ಬೆಂಗಳೂರು: ‘ಭೂಮಿ ಸ್ವಾಧೀನ ಪಡಿಸಿಕೊಳ್ಳುವಾಗ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ’ ಎಂದು ಲೋಕಾಯುಕ್ತರು ತನಿಖೆ ನಡೆಸಿ ವರದಿ ನೀಡಿದ್ದಾರೆ. ಸಿಐಡಿ ಪೊಲೀಸರೂ ತನಿಖೆ ನಡೆಸಿ, ‘ಅಧಿಕಾರಿಗಳು ತಪ್ಪಿತಸ್ಥರು’ ಎಂದು ಹೇಳಿದ್ದಾರೆ. ಆದರೂ ಗೃಹ ಮಂಡಳಿಯಾಗಲಿ, ಸರ್ಕಾರವಾಗಲಿ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಇದು ಧಾರವಾಡದ ಕತೆ. 2005–06ನೇ ಸಾಲಿನಲ್ಲಿ ಗೃಹ ಮಂಡಳಿ ಧಾರವಾಡ ತಾಲ್ಲೂಕು ಹೀರೇಮಲ್ಲಿಗವಾಡ ಗ್ರಾಮದ ಸರ್ವೆ ನಂ 7ರಿಂದ 49ರವರೆಗಿನ 300 ಎಕರೆ ಭೂಮಿಯನ್ನು ಖರೀದಿ ಮಾಡಿ ವಸತಿ ಯೋಜನೆ ಜಾರಿಗೊಳಿಸಲು ನಿರ್ಧರಿಸಿತು. ಆದರೆ ಆಗ ರೈತರಿಂದ ನೇರವಾಗಿ ಭೂಮಿಯನ್ನು ಖರೀದಿ ಮಾಡದೆ ಮಧ್ಯವರ್ತಿಗಳಿಂದ ಖರೀದಿಸಿದ್ದರಿಂದ ಮಂಡಳಿಗೆ ಆರ್ಥಿಕ ನಷ್ಟವಾಯಿತು ಹಾಗೂ ರೈತರಿಗೆ ಅನ್ಯಾಯವಾಯಿತು. ಮಧ್ಯವರ್ತಿಗಳು ಸಾಕಷ್ಟು ಹಣ ಮಾಡಿಕೊಂಡರು ಎಂಬ ಆರೋಪ ಬಂತು.
ರೈತ ನಾಯಕ ಈರೇಶ್ ಹಂಚಟಗೇರಿ ಅವರು ಇದರ ವಿರುದ್ಧ ಹೋರಾಟ ನಡೆಸಿದರು. ಜೊತೆಗೆ ಲೋಕಾಯುಕ್ತಕ್ಕೆ ದೂರನ್ನೂ ಸಲ್ಲಿಸಿದರು. ಲೋಕಾಯುಕ್ತರು ಈ ಬಗ್ಗೆ ಸರ್ಕಾರಕ್ಕೆ ವರದಿಯನ್ನೂ ನೀಡಿದರು. ಅಲ್ಲದೆ ಈ ಬಗ್ಗೆ ಸಿಐಡಿ ತನಿಖೆ ಕೂಡ ನಡೆಯಿತು. ಸಿಐಡಿ ಡಿಜಿಪಿಯಾಗಿದ್ದ ಡಾ.ಡಿ.ವಿ. ಗುರುಪ್ರಸಾದ್ ಅವರು 30–12–2010ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದರು. ‘ಅಧಿಕಾರಿಗಳು ತಪ್ಪು ಮಾಡಿದ್ದಾರೆ’ ಎಂದು ಅವರು ತಮ್ಮ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಈವರೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಧಾರವಾಡ ತಾಲ್ಲೂಕು ಕೆಲಗೇರಿ, ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಮುಮ್ಮಿಗಟ್ಟಿ, ತಡಸಿನಕೊಪ್ಪ, ಲಕಮನಹಳ್ಳಿ ಹಾಗೂ ಹುಬ್ಬಳ್ಳಿ ತಾಲ್ಲೂಕು ಅಮರಗೋಳ, ಗಾಮನಗಟ್ಟಿ, ಸುತಗಟ್ಟಿ ಗ್ರಾಮಗಳಲ್ಲಿ ಗೃಹ ಮಂಡಳಿ ವಸತಿ ಯೋಜನೆಗಾಗಿ ರೈತರನ್ನು ಕಡೆಗಣಿಸಿ ಮಧ್ಯವರ್ತಿಗಳ ಮೂಲಕ ಭೂಮಿ ಪಡೆಯಲಾಗಿದೆ.
ನೂರು ವಸತಿ ಯೋಜನೆಯಡಿ ಗೃಹ ಮಂಡಳಿ ಈ ಯೋಜನೆಯನ್ನು ಕೈಗೊಂಡಿದೆ. ಧಾರವಾಡ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಲೆ ನಿಗದಿ ಸಭೆ ನಡೆದ ಸಂದರ್ಭದಲ್ಲಿಯೂ ನಿಜವಾದ ರೈತರು ಸಭೆಗೆ ಹಾಜರಾಗಿರಲಿಲ್ಲ. ರೈತರೊಂದಿಗೆ ಜಿಪಿಎ ಮಾಡಿಸಿಕೊಂಡಿದ್ದ ಮಧ್ಯವರ್ತಿಗಳೇ ಹಾಜರಾಗಿದ್ದರು ಎನ್ನುವುದು ಸಿಐಡಿ ತನಿಖಾ ವರದಿಯಿಂದ ದೃಢಪಟ್ಟಿದೆ.
ಹಿರೇಮಲ್ಲಿಗವಾಡದ 300 ಎಕರೆ ಜಮೀನುಗಳನ್ನು ಎಕರೆಗೆ ರೂ. 5.75 ಲಕ್ಷದಂತೆ ಖರೀದಿ ಮಾಡಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದರಂತೆ ವಸತಿ ಇಲಾಖೆ ಅಧಿಸೂಚನೆಯನ್ನೂ ಹೊರಡಿಸಿತು.
ಬೆಲೆ ನಿಗದಿ ವಿಷಯವನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡದೇ ಇರುವುದರಿಂದ ಮಧ್ಯವರ್ತಿಗಳಿಗೆ ಅನುಕೂಲವಾಯಿತು. ಇದಕ್ಕೆ ಮಂಡಳಿ ಅಧಿಕಾರಿಗಳ ಬೆಂಬಲವಿತ್ತು.
ಹಿರೇಮಲ್ಲಿಗವಾಡ ಗ್ರಾಮದಲ್ಲಿ 108.17 ಎಕರೆ, ಕೆಲಗೇರಿ ಗ್ರಾಮದಲ್ಲಿ 21.23 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ರೈತರು ಹಾಗೂ ಮಧ್ಯವರ್ತಿಗಳಿಗೆ ಹಣ ನೀಡಲಾಗಿದೆ. ಸರ್ಕಾರದ ಆದೇಶವಿಲ್ಲದ ಭೂಮಿಯನ್ನೂ ಖರೀದಿ ಮಾಡಲಾಗಿದೆ.
ವಸತಿ ಯೋಜನೆಗಾಗಿ ಸರ್ಕಾರ 300 ಎಕರೆ ಭೂಮಿಯನ್ನು ಗುರುತಿಸಿತ್ತು. ಆದರೆ ಇದರಲ್ಲಿ ಕೆಲವು ರೈತರು ಭೂಮಿ ನೀಡಲು ನಿರಾಕರಿಸಿದರು. ಈ ವಿಷಯವನ್ನು ಸರ್ಕಾರಕ್ಕೆ ತಿಳಿಸದೆ ಅಕ್ಕಪಕ್ಕದ ಗ್ರಾಮಗಳ ಭೂಮಿಯನ್ನೂ ವಶಪಡಿಸಿಕೊಳ್ಳಲಾಗಿದೆ.
ಗೃಹ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಮಂಡಳಿ ಆಯುಕ್ತರ ಒಪ್ಪಿಗೆ ಪಡೆದು ಸರ್ಕಾರ ಅನುಮತಿ ನೀಡದೇ ಇರುವ ಭೂಮಿಯನ್ನೂ ಸ್ವಾಧೀನಪಡಿಸಿಕೊಂಡರು. ಇದಕ್ಕೆ ಇನ್ನೂ ಸರ್ಕಾರಿ ಒಪ್ಪಿಗೆ ಸಿಕ್ಕಿಲ್ಲ.
‘ಹಿರೇಮಲ್ಲಿಗವಾಡದ ಸರ್ವೆ ನಂಬರ್ 7ರಿಂದ 49ರವರೆಗಿನ 300 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ಆದರೆ ಮಂಡಳಿ ಅಧಿಕಾರಿಗಳು ಅದೇ ಆದೇಶ ಇಟ್ಟುಕೊಂಡು ಅಕ್ಕಪಕ್ಕದ ಜಮೀನುಗಳನ್ನೂ ವಶಪಡಿಸಿಕೊಂಡಿದ್ದಾರೆ. ಇದು ಗೃಹ ಮಂಡಳಿ ಕಾಯ್ದೆ ಕಲಂ 33(1) ರ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿದೆ.
ಹಿರೇಮಲ್ಲಿಗವಾಡ, ಕೆಲಗೇರಿ, ಚಿಕ್ಕಮಲ್ಲಿಗವಾಡ ಮತ್ತು ಮಮ್ಮಿಗಟ್ಟಿ ಗ್ರಾಮಗಳ 206.06 ಎಕರೆ ಭೂಮಿಯನ್ನು ರೂ. 11.77 ಕೋಟಿ ಕೊಟ್ಟು ಮಂಡಳಿ ಪಡೆದುಕೊಂಡಿದೆ. ಈ ಹಣ ರೈತರ ಬದಲಾಗಿ ಮಧ್ಯವರ್ತಿಗಳ ಪಾಲಾಗಿದೆ ಎನ್ನುವುದು ವಿಚಾರಣೆಯಿಂದ ದೃಢಪಟ್ಟಿದೆ ಎಂದು ಸಿಐಡಿ ವರದಿಯಲ್ಲಿ ಹೇಳಲಾಗಿದೆ.
ಎಂಜಿನಿಯರ್ ಕುಮ್ಮಕ್ಕು: ‘ಗೃಹ ಮಂಡಳಿ ಹುಬ್ಬಳ್ಳಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಕಕ್ಕಯ್ಯ ಅವರು ಜಮೀನು ಸ್ವಾಧೀನಪಡಿಸಿಕೊಳ್ಳುವ ವಿಚಾರವನ್ನು ಮಧ್ಯವರ್ತಿಗಳಿಗೆ ಮೊದಲೇ ತಿಳಿಸಿದ್ದರು. ಮಧ್ಯವರ್ತಿಗಳು ರೈತರಿಂದ ಜಿಪಿಎ ಮಾಡಿಸಿಕೊಂಡಿದ್ದರು.
ಇದನ್ನು ನೋಂದಣಿ ಮಾಡಿಸದೇ ಇರುವುದರಿಂದ ಸರ್ಕಾರಕ್ಕೆ ಮುದ್ರಾಂಕ ಶುಲ್ಕವನ್ನೂ ಕಟ್ಟಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟವಾಗಿದೆ. ಅಲ್ಲದೆ ಕೆಲವು ಮಧ್ಯವರ್ತಿಗಳು ರೈತರಿಂದ ಭೂಮಿಯನ್ನು ಪಡೆದು ಅದನ್ನು ನೇರವಾಗಿ ಗೃಹ ಮಂಡಳಿಗೆ ಮಾರಾಟ ಮಾಡಿದ್ದಾರೆ. ರೈತರಿಗೆ ಜಮೀನಿನ ಪರಿಹಾರದ ಹಣ ಸಿಕ್ಕಿಲ್ಲ. ಅದೆಲ್ಲ ಮಧ್ಯವರ್ತಿಗಳ ಪಾಲಾಗಿದೆ ಎನ್ನುವುದೂ ಕೂಡ ವಿಚಾರಣೆಯಿಂದ ದೃಢಪಟ್ಟಿದೆ. ಕಾರ್ಯಪಾಲಕ ಎಂಜಿನಿಯರ್ ಅವರು ತಮ್ಮ ಲಾಭಕ್ಕಾಗಿ ಮಧ್ಯವರ್ತಿಗಳನ್ನು ಬಳಸಿಕೊಂಡಿದ್ದರು ಎನ್ನುವುದು ಸಾಬೀತಾಗಿದೆ’ ಎನ್ನುವ ಸಂಗತಿಯೂ ಸಿಐಡಿ ವರದಿಯಲ್ಲಿದೆ.
ಈ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಅದು ಸರ್ಕಾರಕ್ಕೆ ಸಲ್ಲಿಸಿದೆ. ಇದಕ್ಕೂ ಮೊದಲು ಲೋಕಾಯುಕ್ತರು ವರದಿ ನೀಡಿದ್ದರು.
ಗೃಹ ಮಂಡಳಿ ಆಯುಕ್ತರ ವಿರುದ್ಧ ಕೂಡ ಕೆಲವು ಆರೋಪಗಳು ಸಾಬೀತಾಗಿದ್ದವು. 2010ರ ಡಿಸೆಂಬರ್ 30ರಂದೇ ಸಿಐಡಿ ವರದಿ ನೀಡಿದ್ದರೂ, ಆ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿಲ್ಲ.
ಈ ನಡುವೆ ಸಿಐಡಿ ವರದಿಯಲ್ಲಿ ಆರೋಪಿ ಎಂದು ಗುರುತಿಸಲಾಗಿರುವ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಕಕ್ಕಯ್ಯ ಸೇವೆಯಿಂದ ನಿವೃತ್ತರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.