ಹುಬ್ಬಳ್ಳಿ: ಜ್ಞಾನಶಕ್ತಿ, ಮೌನಶಕ್ತಿ ಹಾಗೂ ಕ್ರಿಯಾಶಕ್ತಿಯನ್ನು ಭಕ್ತ ಸಮೂಹಕ್ಕೆ ಕಲಿಸಿಕೊಟ್ಟ ಸಿದ್ಧಾರೂಢ ಸ್ವಾಮೀಜಿ `ಓಂ ನಮಃ ಶಿವಾಯ...~ ಮಂತ್ರದ ಮೂಲಕ ಜಗತ್ತನ್ನು ಉದ್ಧರಿಸುವ ಮಾರ್ಗ ಹೇಳಿಕೊಟ್ಟರು ಎಂದು ಅಭಿನವ ಶಿವಪುತ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿದ್ಧಾರೂಢ ಮಠದ ಕೈಲಾಸ ಮಂಟಪದಲ್ಲಿ ಮಂಗಳವಾರ ಸದ್ಗುರು ಸಿದ್ಧಾರೂಢರ 175ನೇ ಜಯಂತ್ಯುತ್ಸವ ಹಾಗೂ ಸದ್ಗುರು ಗುರುನಾಥಾರೂಢರ 100ನೇ ಜನ್ಮೋತ್ಸವದ ಅಂಗವಾಗಿ ಸಿದ್ಧಾರೂಢರ ಕರ್ತೃ ಗದ್ದಿಗೆಗೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮಹಾಮಸ್ತಕಾಭಿಷೇಕದ ಅಂಗವಾಗಿ ಸಿದ್ಧಾರೂಢರ ಕರ್ತೃ ಗದ್ದಿಗೆಗೆ 108 ಕೊಡ ಹಾಲು, 51 ಕೊಡ ಮೊಸರು, 11 ಕೊಡ ತುಪ್ಪ, ಐದು ಕೊಡ ಜೇನು ತುಪ್ಪ, 1,111 ಬಾಳೆಹಣ್ಣು, ಕಾಶಿಯ ಗಂಗಾಜಲ, ಶ್ರೀಶೈಲದ ಪಾತಾಳ ಗಂಗಾಜಲ, 108 ರೀತಿಯ ದ್ರವ್ಯಗಳನ್ನು ಸೇರಿಸಿ ಅಭಿಷೇಕ ಮಾಡಲಾಯಿತು. ನಂತರ ಒಂದು ಕ್ವಿಂಟಲ್ ಹೂವು ಬಳಸಿ ಗದ್ದುಗೆಯನ್ನು ಅಲಂಕರಿಸಲಾಯಿತು.
ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ.ನಟರಾಜನ್ ಮಸ್ತಕಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭಕ್ಕೆ ಮುನ್ನ 508 ಕುಂಭಗಳನ್ನು ಹೊತ್ತ ಮಹಿಳೆಯರು ಹುಬ್ಬಳ್ಳಿ ಚಿಕ್ಕನಂದಿ ಸಿದ್ಧಾರೂಢ ದರ್ಶನಪೀಠ ಹಾಗೂ ರಾಯಚೂರು ಜಿಲ್ಲೆಯ ಮಿಟ್ಟಿಶಾಂತೇಶ್ವರ ಮಠದ ನಿಜಾನಂದ ಸ್ವಾಮೀಜಿ ನೇತೃತ್ವದಲ್ಲಿ ಕೈಲಾಸ ಮಂಟಪಕ್ಕೆ ಆಗಮಿಸಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.