ಸೇಂಟ್ ಪೀಟರ್ಸ್ ಬರ್ಗ್ (ಪಿಟಿಐ): ಸಿರಿಯಾ ಮೇಲೆ ಯಾವುದಾದರೂ ಶಿಸ್ತುಕ್ರಮದ ಕೈಗೊಳ್ಳುವ ಅಗತ್ಯ ಕಂಡುಬಂದರೆ ಅದು ವಿಶ್ವಸಂಸ್ಥೆಯ ಚೌಕಟ್ಟಿನಲ್ಲಿರಬೇಕು ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಗುರುವಾರ ಹೇಳಿದರು.
ಗುರುವಾರ ರಾತ್ರಿ ಇಲ್ಲಿ ಆರಂಭವಾಗಿರುವ ಜಿ 20 ಶೃಂಗಸಭೆಯ ಮೊದಲ ದಿನದ ಚರ್ಚೆಯ ಕೊನೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಏರ್ಪಡಿಸಿದ್ದರು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೇರಿದಂತೆ ವಿವಿಧ ದೇಶದ ಗಣ್ಯರು ಭಾಗವಹಿಸಿದ್ದ ಈ ಔತಣ ಕೂಟದ ವೇಳೆಯಲ್ಲಿ ಕೇಳಿ ಬಂದ ಸಿರಿಯಾ ಸಮಸ್ಯೆ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಪ್ರಧಾನಿ ಸಿಂಗ್ ಅವರು ಮಾತನಾಡಿದರು.
ಜಿ 20 ನಾಯಕರುಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಅವರು ರಾಸಾಯನಿಕ ಅಸ್ತ್ರವನ್ನು ಸಿರಿಯಾದಲ್ಲಾಗಲಿ ಅಥವಾ ಜಗತ್ತಿನಲ್ಲಿ ಎಲ್ಲಿಯೇ ಆಗಲಿ ಬಳಕೆ ಮಾಡುವುದನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಒಂದು ವೇಳೆ ಸಿರಿಯಾದಲ್ಲಿ ರಾಸಾಯನಿಕ ಅಸ್ತ್ರ ಬಳಕೆ ಸಂಭವಿಸಿದ್ದರೆ ಅದು ಏಕೆ ಸಂಭವಿಸಿತು ಎನ್ನುವುದನ್ನು ತಿಳಿಯುವ ಅಗತ್ಯವಿದೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು `ರಾಸಾಯನಿಕ ಅಸ್ತ್ರ ಬಳಸಿದ ಆರೋಪ ಎದುರಿಸುತ್ತಿರುವ ಸಿರಿಯಾ ಕುರಿತಂತೆ ವಿಶ್ವಸಂಸ್ಥೆ ವೀಕ್ಷಕರು ನೀಡುವ ವರದಿಗಾಗಿ ವಿಶ್ವ ಸಮುದಾಯ ಕಾಯಬೇಕು ಎನ್ನುವುದು ಕೂಡ ಪ್ರಧಾನಿ ಅವರು ಆಶಯವಾಗಿದೆ' ಎಂದು ಹೇಳಿದರು.