ರಾಮನಗರ: `ರಾಜ್ಯದ ಜನತೆಯ ಆಶೀರ್ವಾದದಿಂದ ನಾನು ಮುಖ್ಯಮಂತ್ರಿ ಸ್ಥಾನ ಪದಗ್ರಹಿಸಿದ್ದೇನೆ. ಈ ಸಂದರ್ಭದಲ್ಲಿ ವರುಣ ದೇವ ಕೂಡ ನನಗೆ ಶುಭಕೋರಿದ್ದಾನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಬೆಂಗಳೂರಿನಿಂದ ಮೈಸೂರಿಗೆ ಮಂಗಳವಾರ ತೆರಳುತ್ತಿದ್ದ ಮುಖ್ಯಮಂತ್ರಿ ಅವರು ಮಾರ್ಗ ಮಧ್ಯ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಗರದ ಜನತೆ ಮಾಡಿದ ಸನ್ಮಾನ ಮತ್ತು ಅಭಿನಂದನೆ ಸ್ವೀಕರಿಸಿದ ಅವರು ತುಂತುರು ಮಳೆ ನಡುವೆಯೂ ಮಾತನಾಡಿದರು.
`ನನಗೆ ಮುಖ್ಯಮಂತ್ರಿ ಸ್ಥಾನ ದೊರೆತ ಸಂದರ್ಭದಲ್ಲಿ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವುದು ಶುಭದ ಸಂಕೇತ. ಇದೇ ಸಂದರ್ಭದಲ್ಲಿ ರಾಜ್ಯದ ಜೀವನದಿಯಾದ ಕಾವೇರಿ ಕೂಡ ಮೈದುಂಬಿ ಹರಿಯುತ್ತಿದೆ. ಹಾಗಾಗಿ ಕಾವೇರಿ ತಾಯಿಗೆ ಬಾಗೀನ ಅರ್ಪಿಸಿ, ಆಶೀರ್ವಾದ ಪಡೆದುಕೊಳ್ಳಲು ಮೈಸೂರಿಗೆ ತೆರಳುತ್ತಿದ್ದೇನೆ~ ಎಂದು ಅವರು ಹೇಳಿದರು.
ಕೆಲವೇ ದಿನಗಳಲ್ಲಿ ರಾಮನಗರಕ್ಕೆ ಆಗಮಿಸಿ ಒಂದೆರಡು ಗಂಟೆಗಳ ಕಾಲ ಇಲ್ಲಿಯೇ ಇದ್ದು ಜನರೊಡನೆ ಮಾತನಾಡುತ್ತೇನೆ ಎಂದ ಮುಖ್ಯಮಂತ್ರಿ ಸದಾನಂದಗೌಡ ಅವರು, `ಸಿ.ಪಿ.ಯೋಗೀಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡ್ದ್ದಿದರಿಂದ ಈ ಭಾಗದ ಜನತೆಗೆ ಸಂತಸ ತಂದಿದೆ ಎಂದು ಭಾವಿಸಿದ್ದೇನೆ. ನಿಮ್ಮೆಲ್ಲರಿಗೂ ಶುಭವಾಗಲಿ~ ಎಂದು ಹೇಳಿ ಮೈಸೂರಿನತ್ತ ಹೊರಟರು.
ಮುಖ್ಯಮಂತ್ರಿ ಅವರೊಡನೆ ಬಂದಿದ್ದ ಸಚಿವರಾದ ಆರ್.ಅಶೋಕ್, ಸಿ.ಪಿ.ಯೋಗೀಶ್ವರ್, ರಾಮದಾಸ್ ಅವರು ಮುಖ್ಯಮಂತ್ರಿ ಜತೆಯಲ್ಲಿಯೇ ತೆರಳಿದರು.ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಮುಖ್ಯಮಂತ್ರಿ ಅವರನ್ನು ಸ್ವಾಗತಿಸಲು ನೂರಾರು ಸಂಖ್ಯೆಯಲ್ಲಿ ಜನತೆ ನಗರದ ಐಜೂರು ವೃತ್ತದ ಬಳಿ ಜಮಾಯಿಸಿದ್ದರು.
ಸಂಜೆ 5 ಗಂಟೆಯಿಂದ ಕಾಯುತ್ತಿದ್ದ ಜನತೆಗೆ ಮುಖ್ಯಮಂತ್ರಿ ಅವರ ದರ್ಶನ ಆದದ್ದು 6.45 ಗಂಟೆಗೆ. ಅದೂ ಕೇವಲ 5 ನಿಮಿಷ. ಕಾರ್ಯಕರ್ತರಿಗೂ ಮೊದಲು ಮುಖ್ಯಮಂತ್ರಿ ಅವರನ್ನು ತುಂತುರು ಮಳೆಯ ಸಿಂಚನವೇ ಸ್ವಾಗತಿಸಿತು.
ಇದ್ದ ಅಲ್ಪ ಅವಧಿಯಲ್ಲಿಯೇ ನಗರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಸಿ.ಎಂ.ಗೆ ಹೂವಿನ ಹಾರ ಹಾಕಿ ಅಭಿನಂದಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜನತೆಯನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರೆ, ಸಂಚಾರ ವ್ಯವಸ್ಥೆ 10 ರಿಂದ 15 ನಿಮಿಷ ಅಸ್ತವ್ಯಸ್ತಗೊಂಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.