ಹೈದರಾಬಾದ್ (ಪಿಟಿಐ): ಆಂಧ್ರ ವಿಭಜನೆ ಕುರಿತ ಕರಡು ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಅಖಂಡ ಆಂಧ್ರಪ್ರದೇಶ ಪರ ಹೋರಾಟ ನಡೆಸುತ್ತಿರುವ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಶನಿವಾರ ಸೀಮಾಂಧ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳು ಅಖಂಡ ಆಂಧ್ರಪ್ರದೇಶ ಪರ ಹೋರಾಟ ಮಾಡುತ್ತಿರುವ ಸಂಘಟನೆಗಳೊಂದಿಗೆ ಸೇರಿ ಸೀಮಾಂಧ್ರ ಭಾಗದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದ್ದವು.
ಈ ಮುನ್ನ, ವೈಎಸ್ಆರ್ ಕಾಂಗ್ರೆಸ್ ಪಕ್ಷ ಮಾತ್ರ ಶುಕ್ರವಾರ ಬಂದ್ಗೆ ಕರೆ ನೀಡಿತ್ತು. ನಂತರ ಇದನ್ನು ಶನಿವಾರಕ್ಕೂ ವಿಸ್ತರಿಸುವಂತೆ ಆ ಪಕ್ಷ ಕರೆ ಕೊಟ್ಟಿತು. ಆಂಧ್ರಪ್ರದೇಶ ಪತ್ರಾಂಕಿತೇತರ ಅಧಿಕಾರಿಗಳ ಸಂಘ, ಟಿಡಿಪಿ ಪ್ರತ್ಯೇಕವಾಗಿ ಶನಿವಾರ ಬಂದ್ಗೆ ಕರೆ ನೀಡಿದ್ದವು.
ಈ ಮಧ್ಯೆ, ಆಂಧ್ರಪ್ರದೇಶ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಜವಳಿ ಸಚಿವ ಕಾವೂರಿ ಸಾಂಬಸದಾಶಿವ ರಾವ್, ಈ ಕುರಿತ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರಕುವ ಸಾಧ್ಯತೆ ಇಲ್ಲ ಎಂದರು.
‘ಕರಡು ಮಸೂದೆಗೆ ಸಂಪುಟ ಒಪ್ಪಿಗೆ ನೀಡಿರಬಹುದು ಆದರೆ, ಈ ಮಸೂದೆ ಸಂಸತ್ತಿಗೆ ಬರುವುದೇ ಅನುಮಾನ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.