ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯ ಸೊಬಗು ಕಲೆಯ ಬೆರಗು

Last Updated 12 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಸೀರೆ ನೇಯುವ ಕೈಗಳು ಕುಂಚ ಹಿಡಿದಿದ್ದವೇ? ಸಾಕ್ಷಾತ್ ರಾಜಾ ರವಿವರ್ಮನೇ ಆ ಸೀರೆಯ ಸೆರಗಿನಲ್ಲಿ ಕುಂಚವಾಡಿಸಿದನೇ? ಆ ಸೀರೆಯ ಅಂಚಿನಲ್ಲಿ ಮಹಾಭಾರತದ ಉಪಕಥೆಯಾದ `ನಳ-ದಮಯಂತಿ~ ಮೇಳೈಸಿದ ಬಗೆಯಾದರೂ ಹೇಗೆ? ಸೀರೆಯ ಸೊಬಗಿಗೆ ಕಲೆಯ ಬೆರಗು ಸಾಥ್ ನೀಡಿದ ಬಗೆಯಾದರೂ ಹೇಗೆ?

ನಿಜ, ಆ ಸೀರೆಯ ಮೇಲೆ ಒಮ್ಮೆ ಕಣ್ಣಾಡಿಸಿದವರು ಹೀಗೆಲ್ಲ ಊಹಿಸಿ ಬೆರಗಾದರು.

ಸೀರೆಯಲ್ಲಿ ಕಲೆ, ಕುಂಚ, ರವಿವರ್ಮ, ನಳದಮಯಂತಿ... ಇದೇನು ಎಂದಿರಾ?
ಈ ಸಾಧನೆ ಮಾಡಿರುವುದು ತಮಿಳುನಾಡಿನ ಕಂಚಿಯ `ಆರ್‌ಎಂಕೆವಿ~ ಬ್ರಾಂಡ್‌ನ ರೇಷ್ಮೆ ಸೀರೆ ತಯಾರಕ ಆರ್. ಎಂ. ಕೆ. ಶಿವಕುಮಾರ್.

ಯಶವಂತಪುರ ಬಳಿಯ ಓರಾಯನ್ ಮಾಲ್‌ನಲ್ಲಿ ಇದೇ ಭಾನುವಾರ (ಆ.12) ಕಾರ್ಯಾರಂಭ ಮಾಡಲಿರುವ  `ಆರ್‌ಎಂಕೆವಿ ಸಿಲ್ಕ್ಸ್~ ಮಳಿಗೆಯು ನಗರದ ರೇಷ್ಮೆ ಸೀರೆಗಳ ಮಾರುಕಟ್ಟೆಯಲ್ಲೆ ಮೈಲಿಗಲ್ಲು ಆಗಲು ಮತ್ತು ಗ್ರಾಹಕರಿಗೆ ಅಭೂತಪೂರ್ವ ಅನುಭವವನ್ನು ನೀಡುವ ಎಲ್ಲಾ ತಯಾರಿ ಮಾಡಿಕೊಂಡಿದೆ. ರಾಜಾರವಿವರ್ಮನ ಕಲಾಕೃತಿ, ತಿರುವಳ್ಳುವರ್ ಅವರ ತಿರುಕ್ಕುರಲ್, ತಮಿಳುನಾಡಿನ ಪದ್ಮನಾಭಪುರಂ ಅರಮನೆ... ಹೀಗೆ ಹತ್ತಾರು ಬಗೆಯ ಅಪರೂಪದ ವಿನ್ಯಾಸಗಳ, ಚಿತ್ತಾರಗಳ ಸೀರೆಗಳು `ಆರ್‌ಎಂಕೆವಿ ಡಿಸೈನ್ ಸ್ಟುಡಿಯೊ~ದಲ್ಲಿ ಗ್ರಾಹಕರಿಗೆ ಲಭ್ಯ.

ರೇಷ್ಮೆ ಸೀರೆಗೆ ಹೆಸರಾಗಿರುವ `ಆರ್‌ಎಂಕೆವಿ~ 88 ವರ್ಷಗಳಿಂದಲೂ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಪ್ರಸ್ತುತ, ಈ ವಂಶಪಾರಂಪರ‌್ಯ ವ್ಯವಹಾರ ಮುನ್ನಡೆಸುತ್ತಿರುವ ತಿರುನೆಲ್ವೇಲಿಯ ಶಿವಕುಮಾರ್, ಐಐಟಿಯಲ್ಲಿ ಟೆಕ್ಸ್‌ಟೈಲ್ ಎಂಜಿನಿಯರಿಂಗ್ ಪದವೀಧರ. ಇಲ್ಲಿ ಪ್ರಸ್ತಾಪಿಸಲಾಗಿರುವ ಚಿತ್ತಾರಗಳು, ವಿನ್ಯಾಸಗಳು ಅವರದೇ ಕಲ್ಪನೆಯ ಕೂಸುಗಳು.

ಕಲೆಯ ಬಲೆ
ನಳ-ದಮಯಂತಿಯ ಪ್ರಸಂಗ ಸೀರೆಯ ಅಂಚು ಆಗಿ, ಹಂಸದೊಂದಿಗೆ ಸಂವಾದಿಸುತ್ತಿರುವ ದಮಯಂತಿ ಆ ಸೀರೆಯ ಸೆರಗು ಆಗಿ, ಇಡೀ ಸೀರೆಯೇ ಕಲೆಯ ಬಲೆಯಾಗಿ ಹೆಣಿಗೆಯಾಗಿದೆ.

ರಾಜಾ ರವಿವರ್ಮನ ಸಾರ್ವಕಾಲಿಕ ಕಲಾಕೃತಿಯಾದ `ಹಂಸ-ದಮಯಂತಿ~ ಈ ಸೀರೆಯಲ್ಲಿ ಯಥಾವತ್ ಪಡಿಮೂಡಿರುವ ಬಗೆಯನ್ನು ಸಾಕ್ಷಾತ್ ನೋಡಿಯೇ ತಿಳಿಯಬೇಕು. ರವಿವರ್ಮನ ಕಲಾಕೃತಿಗಳನ್ನು `ಜೀವಂತ~ವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅವನು ಬಳಸಿದ ನೆರಳು/ಕತ್ತಲು ಹಾಗೂ ಬೆಳಕಿನ ವರ್ಣಸಂಯೋಜನೆ. ಸೀರೆಯ ನೇಯ್ಗೆಯಲ್ಲಿ ಅವು ಯಥಾವತ್ ಪಡಿಮೂಡಿರುವುದು ಆ ನೇಯ್ಗೆಕಾರನ ಕೌಶಲ್ಯದ ಪ್ರತೀಕ.

ತಿರುಕ್ಕುರಳ್ ಸೀರೆ
ತಿರುವಳ್ಳುವರ್ ಅವರ ತಿರುಕ್ಕುರಳ್, ಆರ್‌ಎಂಕೆವಿಯ ನೇಯ್ಗೆಯಲ್ಲಿ ಸೀರೆಯಾಗಿದೆ. ಬಳಕೆಯಾಗಿರುವುದು 18 ತಿರುಕ್ಕುರಳ್. ಸೀರೆಗೆ ಕಾವ್ಯದ ಸ್ಪರ್ಶ... ರೇಷಿಮೆ ಒನಪು...

`ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ನಮ್ಮತನದ ಛಾಪು ಒತ್ತಲು ವಿಶಿಷ್ಟವಾದುದನ್ನು ಮಾಡಲು ಮುಂದಾಗಿದ್ದೇವೆ. ಇದು, ರಾಜಾ ರವಿವರ್ಮನ 150ನೇ ಹುಟ್ಟುಹಬ್ಬದ ವರ್ಷವಾದ್ದರಿಂದ ಅವನ ಕಲಾಕೃತಿಗಳನ್ನು ನಮ್ಮ ಸೀರೆಗಳಲ್ಲಿ ವಿನ್ಯಾಸಗೊಳಿಸಿದ್ದೇವೆ. ಬೇರೆ ಯಾವ ಬ್ರಾಂಡ್‌ನಲ್ಲೂ ಕಂಡಿರದ ತಮಿಳುನಾಡಿನ ಪುರಾತನ ದೇಗುಲಗಳೂ ನಮ್ಮ ವಿನ್ಯಾಸದ ವೈಶಿಷ್ಟ್ಯ. ದಮಯಂತಿ- ಹಂಸದ ಸಂವಾದದ ವಿನ್ಯಾಸವುಳ್ಳ ಸೀರೆ ನೇಯಲು ಮೂವರು ಕುಶಲ ನೇಕಾರರು ನಾಲ್ಕು ತಿಂಗಳ ಕಾಲ ಅಹರ್ನಿಶಿ ಶ್ರಮಿಸಿದ್ದಾರೆ~ ಎಂದು ವಿವರಿಸುತ್ತಾರೆ, ಶಿವಕುಮಾರ್.

ವರ್ಣಜಲಂ ಎಂಬ ಸೀರೆಯನ್ನೂ ಒಳಗೊಂಡಂತೆ ಆರ್‌ಎಂಕೆವಿಯ ಪ್ರತಿಯೊಂದು ರೇಷ್ಮೆ ಸೀರೆಗೂ ಪರಿಸರಸ್ನೇಹಿ ಡೈ ಬಳಸಿರುವುದು ವಿಶೇಷ. ಇನ್ನೊಂದು ಸೀರೆಯಿದೆ. ಚೌಕಳಿ ಚೌಕಳಿ ಚಿತ್ತಾರದ ಈ ಸೀರೆಗೆ ಬಳಸಿರುವ ಬಣ್ಣಗಳ ಸಂಖ್ಯೆ 50ಸಾವಿರ!  

ಒಂದು ಸೀರೆ ನಾಲ್ಕು ಸೆರಗು!
ಇದೆಂಥಾ ಸೀರೆ ಎನ್ನಬೇಡಿ.

ನಾಲ್ಕು ಸೆರಗು ಇರಬೇಕೆಂದರೆ ಆ ಸೀರೆ ಮಾಮೂಲಿಗಿಂತ ನಾಲ್ಕು ಪಟ್ಟು ಉದ್ದವಿದೆಯಾ ಎಂದು ಹುಬ್ಬೇರಿಸುವುದೂ ಬೇಡ.

ಈ ಸೀರೆಗೆ ಇನ್ನೂ ಒಂದು ವೈಶಿಷ್ಟ್ಯವಿದೆ... ಇದನ್ನು ಎರಡೂ ಕಡೆ ಉಡಬಹುದು!

ಮೊದಲರ್ಧಕ್ಕೆ ಒಂದು, ಎರಡನೇ ಅರ್ಧಕ್ಕೆ ಇನ್ನೊಂದು ಎಂದು ಎರಡು ಬಣ್ಣಗಳ ಸಂಯೋಜನೆಯಲ್ಲಿ ನೇಯಲಾಗಿರುವ ಈ ಅಪ್ಪಟ ರೇಷ್ಮೆ ಸೀರೆಗೆ ಎರಡೂ ಭಾಗಗಳಲ್ಲಿ ಒಳಗೆ ಮತ್ತು ಹೊರಗೆ ಎರಡೆರಡು ಸೆರಗುಗಳನ್ನು ವಿನ್ಯಾಸಗೊಳಿಸಲಾಗಿದೆ!


 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT