ಕೋಲಾರ: ಸುಂಕರಹಿತವಾಗಿ ರೇಷ್ಮೆ ನೂಲು ಆಮದು ಮಾಡಿಕೊಳ್ಳುವುದನ್ನು ವಿರೋಧಿಸಿ ನಗರದಲ್ಲಿ ಗುರುವಾರ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನಾ ಮೆರವಣಿಗೆ, ಧರಣಿ ನಡೆಸಿದರು. ನಗರದ ಗಾಂಧಿವನದಿಂದ ಮೆರವಣಿಗೆ ಶುರುಮಾಡಿದ ಪ್ರಮುಖರು, ರೈತರು, ಕಾರ್ಯಕರ್ತರು ಎಂ.ಜಿ.ರಸ್ತೆ, ಕಾಲೇಜು ವೃತ್ತ, ಮೆಕ್ಕೆ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಅಲ್ಲಿ ಧರಣಿ ನಡೆಸಿದರು.
ಸುಂಕರಹಿತವಾಗಿ ರೇಷ್ಮೆ ನೂಲು ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ರೈತರಿಗೆ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿಲುವು ಬದಲಿಸಬೇಕು ಎಂದು ಆಗ್ರಹಿಸಿದರು.ದೇಶಿ ರೈತ ಪರ ನಿಲುವು ಪ್ರಕಟಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರನಾರಾಯಣರೆಡ್ಡಿ, ಜಿಲ್ಲಾ ಘಟಕದ ಶಾಮಣ್ಣಗೌಡ, ಚಿನ್ನಾಪುರ ನಾರಾಯಣಸ್ವಾಮಿ, ಸಿರಾಜ್, ಜಯಶಂಕರ್, ಪಿ.ಎಸ್.ಸತ್ಯನಾರಾಯಣರಾವ್, ಪಾರ್ಥಸಾರಥಿ, ಓಂಶಕ್ತಿ ಚಲಪತಿ, ಶ್ರೀನಿವಾಸ್, ಶಾಂತಮ್ಮ, ಅರುಣಕುಮಾರ್, ಕೆಂಪಣ್ಣ, ಲಕ್ಷ್ಮಣಗೌಡ, ಶಿವಾರೆಡ್ಡಿ,ಜಾಮಿಲ್ ಅಲ್ಜಾಖಾನ್, ಸಾವುಕಾರ ಶಂಕರಪ್ಪ, ಯಲ್ದೂರು ಪದ್ಮನಾಭ್ ಭಾಗವಹಿಸಿದ್ದರು.