ಶಿಲ್ಲಾಂಗ್, (ಪಿಟಿಐ): ದೇಶದ ಕುತೂಹಲ ಕೆರಳಿಸಿದ್ದ ಸುಖ್ನಾ ಭೂಹಗರಣದಲ್ಲಿ ಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಪಿ.ಕೆ. ರಥ್ ಅವರ ಮೇಲಿದ್ದ ಭ್ರಷ್ಟಾಚಾರ ಆರೋಪ ಸಾಬೀತಾಗಿದ್ದು ಕೋರ್ಟ್ ಮಾರ್ಷಲ್ ಭಾನುವಾರಕ್ಕೆ ಶಿಕ್ಷೆಯನ್ನು ಕಾಯ್ದಿರಿಸಿದೆ.
ರಥ್ ಮೇಲಿದ್ದ ಮೂರು ಆರೋಪಗಳೂ ಸಾಬೀತಾಗಿದ್ದು ಭಾನುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಒಂದು ವೇಳೆ ಅವರು ಶಿಕ್ಷೆಗೆ ಒಳಗಾದಲ್ಲಿ ಇನ್ನೂ ಸೇವೆಯಲ್ಲಿ ಇರುವಾಗಲೇ ಭ್ರಷ್ಟಾಚಾರದ ಆರೋಪದ ಮೇಲೆ ಶಿಕ್ಷೆಗೆ ಒಳಗಾದ ಸೇನೆಯ ಪ್ರಥಮ ಲೆಫ್ಟಿನೆಂಟ್ ಜನರಲ್ ಎಂಬ ಕುಖ್ಯಾತಿಗೆ ಒಳಗಾಗಲಿದ್ದಾರೆ.
ಈ ಮೊದಲು ಹಲವಾರು ಲೆಫ್ಟಿನೆಂಟ್ ಜನರಲ್ ಕೋರ್ಟ್ ಮಾರ್ಷಲ್ ಎದುರಿಸಿದ್ದರೂ ನಿವೃತ್ತಿಯ ನಂತರ ಶಿಕ್ಷೆಗೆ ಒಳಗಾಗಿದ್ದರು. ಪಶ್ಚಿಮ ಬಂಗಾಳದ ಸುಖ್ನಾ ಸೇನಾ ನೆಲೆ ಪಕ್ಕದ ತುಂಡು ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಗೀತಾಂಜಲಿ ಶಿಕ್ಷಣ ಸಂಸ್ಥೆಗೆ ನಿರಪೇಕ್ಷಣಾ ಪತ್ರ (ಎನ್ಒಸಿ) ನೀಡಿದ್ದರು. ಮೇಲಧಿಕಾರಿಗಳ ಗಮನಕ್ಕೆ ತಾರದೆ ಗೀತಾಂಜಲಿ ಟ್ರಸ್ಟ್ಗೆ ಭೂಮಿ ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು.