ಕೋಲ್ಕತ್ತ (ಪಿಟಿಐ): ಆಡಿದ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಸೋತು ಚಿಂತೆಗೀಡಾಗಿರುವ ಕೋಲ್ಕತ್ತ ನೈಟ್ ರೈಡರ್ಸ್, ಗೆಲುವಿನ ಹಾದಿಗೆ ಮರಳಲು ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಹೆಚ್ಚು ಅವಲಂಬಿಸಿದೆ.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಕೆಆರ್ ಬ್ಯಾಟ್ಸ್ಮನ್ ಇಯಾನ್ ಮೋರ್ಗನ್, `ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿ ಸುನಿಲ್ ನಾರಾಯಣ್ ಮೇಲೆ ಹೆಚ್ಚು ನಿರೀಕ್ಷೆ ಹೊಂದಿದ್ದೇವೆ. ಅವರು ತಂಡಕ್ಕೆ ಆಶಾಕಿರಣ.
ಪಂದ್ಯ ಗೆದ್ದುಕೊಡುವ ಶಕ್ತಿಯನ್ನು ಅವರು ಹೊಂದಿದ್ದಾರೆ. ತಂಡ ಸೋಲುತ್ತಿದ್ದರೂ ಸುನಿಲ್ ಚೆನ್ನಾಗಿ ಬೌಲಿಂಗ್ ಮಾಡುವುದನ್ನು ನೋಡಲು ಸಂತಸವಾಗುತ್ತದೆ' ಎಂದು ಹೇಳಿದರು.
ಇದೇ ವೇಳೆ, `ಸತತ ಸೋಲಿನಿಂದ ತಂಡ ಚಿಂತೆಗೀಡಾಗಿಲ್ಲ. ಕಳೆದ ಬಾರಿಯ ಟೂರ್ನಿಯಲ್ಲೂ ಇದೇ ರೀತಿಯ ಪರಿಸ್ಥಿತಿಯಲ್ಲಿದ್ದ ತಂಡ, ನಂತರ ಚೇತರಿಸಿಕೊಂಡಿತ್ತು. ಈ ಬಾರಿಯೂ ಗೆಲುವಿನ ಹಾದಿಗೆ ತಂಡ ಮರಳಲಿದೆ. ಭಾನುವಾರದ ಪಂದ್ಯದಿಂದಲೇ ನಮ್ಮ ಗೆಲುವಿನ ಅಭಿಯಾನ ಮತ್ತೆ ಆರಂಭವಾಗಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.