ಬೆಂಗಳೂರು: `ಹೈನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಮಹತ್ತರ ವಾಗಿದ್ದು, ಅವರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಮೂಲಕ ಅಭಿವೃದ್ದಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ಹಾಲು ಉತ್ಪಾದಕರ ಸಂಘಗಳು ಶ್ರಮ ವಹಿಸಬೇಕು~ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಆರ್.ಕೆ. ರಮೇಶ್ ಶ್ಲಾಘಿಸಿದರು.
ಸರ್ಜಾಪುರ ಹಾಲು ಉತ್ಪಾದಕರ ಸಹಕಾರ ಸಂಘ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಆನೇಕಲ್ ತಾಲ್ಲೂಕಿನಲ್ಲಿ ಇರುವ ಒಟ್ಟು 153 ಹಾಲು ಉತ್ಪಾದಕರ ಸಂಘಗಳಲ್ಲಿ, ಸರ್ಜಾಪುರ ಹಾಲು ಉತ್ಪಾದಕರ ಒಕ್ಕೂಟವು ಸಂಘದ ಸದಸ್ಯರಿಗೆ ಉತ್ತಮ ಸೌಲಭ್ಯ ನೀಡುವಲ್ಲಿ ಮುಂದಿದೆ~ ಎಂದು ಅವರು ಹೇಳಿದರು.
ಒಕ್ಕೂಟದ ಅಧ್ಯಕ್ಷ ಮುನಿರಾಜು ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಒಕ್ಕೂಟದ ಸದಸ್ಯರ ಮಕ್ಕಳು ಮತ್ತು ಪ್ರಗತಿಪರ ರೈತ ಎಸ್.ಪಿ.ಗೋಪಾಲಪ್ಪ ದಂಪತಿಯನ್ನು ಸನ್ಮಾನಿಸಲಾಯಿತು.
ಸಂಘದ ಸದಸ್ಯರಾದ ನಾರಾಯಣರೆಡ್ಡಿ, ರತ್ನ ಶ್ರೀರಾಮುಲು, ಜಿ. ನಾಗರಾಜು, ಶ್ರೀಧರ, ಗೋಪಾಲರೆಡ್ಡಿ ಇತರರು ಉಪಸ್ಥಿತರಿದ್ದರು.