ಕುಷ್ಟಗಿ: ಶಿಸ್ತು, ಪ್ರಾಮಾಣಿಕತೆ, ಸೇವಾ ಮನೋಭಾವದಂಥ ಉನ್ನತ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳು ಸಂಕಲ್ಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶಾಹಮೀದ ದೋಟಿಹಾಳ ಭಾನುವಾರ ಹೇಳಿದರು.
ತಾಲ್ಲೂಕಿನ ತಾವರಗೇರಾದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್ನಲ್ಲಿ ಏರ್ಪಡಿಸಲಾಗಿದ್ದ ಪ್ರಸಕ್ತ ವರ್ಷದ `ರಾಷ್ಟ್ರೀಯ ಸೇವಾ ವಿಶೇಷ ಶಿಬಿರ~ದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಎನ್.ಎಸ್.ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ್.ಯೋಜನೆ ಕಾರ್ಯಕ್ರಮ ಅಧಿಕಾರಿ ಎಸ್.ಎಸ್.ಗುರುಸ್ಥಳಮಠ, ಶಿಬಿರದಲ್ಲಿ ಕಲಿತ ಸೇವಾ ಮನೋಭಾವ ವಿದ್ಯಾರ್ಥಿಗಳನ್ನು ಸಮುದಾಯದತ್ತ ಕರೆದೊಯ್ಯಲು ಪ್ರೇರಣೆ ನೀಡುತ್ತದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂಕಮ್ಮ ಉರಿಜಾಳ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಸುಭಾಸ್ ಪೋರೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಮುಖರಾದ ಪ್ರಹ್ಲಾದಗೌಡ ಮೇದಿಕೇರಿ, ದಸಂಸ ಮುಖಂಡ ಪಿ.ರಮೇಶ್, ಶಾಮೀದ್ ಪಟೇಲ ಮೊದಲಾದವರು ವೇದಿಕೆಯಲ್ಲಿದ್ದರು.
ಸಿದ್ದಣ್ಣ ಮರಿಬಸಪ್ಪನವರ್ ನಿರೂಪಿಸಿದರು. ಬಲರಾಮ ಜೋಷಿ ಸ್ವಾಗತಿಸಿದರು. ಲಕ್ಷ್ಮಣಸಿಂಗ್ ವಗರನಾಳ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಾಮದ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಪನ್ಯಾಸ: ಸಂಜೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಪಿ.ವೈ.ದಂಡಿನ ಕುವೆಂಪು ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪ್ರಹ್ಲಾದಗೌಡ ಮೆದಿಕೇರಿ ಅಧ್ಯಕ್ಷತೆ ವಹಿಸಿದ್ದರು. ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.