ರಟ್ಟೀಹಳ್ಳಿ: ಇದು ಯಾವುದೇ ನದಿಯ ದಡದಲ್ಲಿರುವ ಅಥವಾ ಯಾವುದೇ ಕೆರೆಯನ್ನು ಒತ್ತುವರಿ ಮಾಡಿಕೊಂಡು ಅದರ ದಡದಲ್ಲಿರುವ ಜಮೀನಲ್ಲ. ಇದು ತುಂಗಾ ಮೇಲ್ದಂಡೆ ಯೋಜನೆ ಇಲಾಖೆಯ ನಿರ್ಲಕ್ಷ್ಯದಿಂದ ಆಗಿರುವ ಸಮಸ್ಯೆ.
ಇಲ್ಲಿಗೆ ಸಮೀಪದ ಕುಡಪಲಿ ಗ್ರಾಮದ ಸರ್ವೇ ನಂಬರ್135/1 ರಲ್ಲಿ ತುಂಗಾ ಯೋಜನೆಯ ಕಾಲುವೆಯಿಂದ ಹರಿದು ಬರುತ್ತಿರುವ ನೀರು. ಮುಖ್ಯ ಕಾಲುವೆ ಯಿಂದ ಉಪಕಾಲುವೆಗೆ ಸರಬರಾಜಾದ ನೀರು ಈ ರೈತನ ಹೊಲದ ಒಂದು ಎಕರೆ ಪ್ರದೇಶದಲ್ಲಿ ಸೃಷ್ಟಿಸಿರುವ ಅವಾಂತರ ಇದು. ತುಂಗಾ ಮೇಲ್ದಂಡೆಯ ಕಾಲು ವೆಗೆ ಪ್ರತಿ ಬಾರಿ ನೀರು ಬಿಟ್ಟಾಗಲೂ ರೈತ ರಾಘವೇಂದ್ರ ಕುಲಕರ್ಣಿ ಅವರ ಜಮೀನಿಗೆ ದೊಡ್ಡ ಪ್ರಮಾಣದ ನೀರು ನಿಲುಗಡೆ ಯಾಗುತ್ತದೆ.
ರಾಘವೇಂದ್ರ ಅವರ ಜಮೀನಿನ ಮುಂದುಗಡೆ ಉಪ ಕಾಲುವೆ ಮೂಲಕ ಸಾಗಲು ತೊಂದರೆಯಾಗಿದೆ. ಈ ಕಾರಣ ದಿಂದ ಈ ನೀರು ಮುಂದೆ ಸಾಗುವ ಬದಲು ಇವರ ಜಮೀನನಲ್ಲಿಯೇ ಸಂಗ್ರಹಗೊಳ್ಳುತ್ತದೆ. ಹೀಗಾಗಿ ಈ ರೈತ ಪ್ರತಿ ವರ್ಷ ಬೆಳೆ ನಷ್ಟವನ್ನು ಅನುಭವಿಸುತ್ತಿದ್ದಾನೆ. ಜಮೀನನಲ್ಲಿ ಬೆಳೆದು ನಿಂತಿರುವ ಮೆಕ್ಕೆಜೋಳ, ಹತ್ತಿ, ಶೇಂಗಾ ಎಲ್ಲಾ ನೀರು ಪಾಲಾಗುತ್ತಿದೆ. ರಾಘವೇಂದ್ರ ಅವರ ಈ ಸಮಸ್ಯೆಯನ್ನು ಅಂದಿನ ಎಂಜಿನಿಯರ್ ದಯಾನಂದ ರವರಿಗೆ ತಿಳಿಸಲಾಗಿತ್ತು.
ಆದರೆ, ತುಂಗಾ ಮೇಲ್ದಂಡೆ ಯೋಜನೆಯಿಂದ ರೈತನಿಗೆ ಯಾವುದೇ ಪರಿಹಾರ ದೊರಕಿಲ್ಲ. ಪ್ರತಿ ವರ್ಷ ಕಾಲುವೆಗೆ ನೀರು ಹರಿಸಿದ ಸಂದರ್ಭದಲ್ಲಿ ಜಮೀನಿಗೆ ನುಗ್ಗುವ ನೀರಿ ನಿಂದ ಕಂಗಾಲಾಗಿರುವ ರೈತನಿಗೆ ಇಲಾಖೆ ಸೂಕ್ತ ಪರಿಹಾರ ಒದಗಿಸಿಕೊಡಬೇಕಿದೆ.