ಕಂಪ್ಲಿ: ಇಲ್ಲಿಯ ಸರ್ಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಹಲವು ಸೌಲಭ್ಯಗಳು ದೊರೆಯುತ್ತಿವೆ. ಜೊತೆಗೆ ಉನ್ನತ ವಿಜ್ಞಾನ ಪ್ರಯೋಗಾಲಯ ಮತ್ತು ಸುಸಜ್ಜಿತ ಉತ್ತಮ ಗ್ರಂಥಾಲಯ ಸೌಕರ್ಯವೂ ಶಾಲೆಯಲ್ಲಿ ಇದೆ. ಆದರೆ ಬೋಧಿಸಲು ಸಂಬಂಧಪಟ್ಟ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಈ ರೀತಿಯ ಭವಿಷ್ಯದ ಡೋಲಾ ಯಮಾನ ಸ್ಥಿತಿಯನ್ನು ಇಲ್ಲಿಗೆ ಸಮೀಪದ ಹಂಪಾದೇವನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳು ಕಳೆದ ಎರಡು ವರ್ಷದಿಂದ ಎದುರಿ ಸುತ್ತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 8ನೇ ತರಗತಿಯಲ್ಲಿ 16 ವಿದ್ಯಾರ್ಥಿನಿಯರು ಮತ್ತು 10 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿ ದ್ದಾರೆ. ಕುಗ್ರಾಮ, ಕೃಷಿ ಕೂಲಿ ಆಧಾರಿತ ಗ್ರಾಮವಾಗಿದ್ದರೂ ಈ ಶಾಲೆಯ 8ತರಗತಿಗೆ 16 ವಿದ್ಯಾರ್ಥಿ ನಿಯರು ತಪ್ಪದೆ ಶಾಲೆಗೆ ಹಾಜ ರಾಗುತ್ತಿದ್ದಾರೆ ಎನ್ನುವುದು ವಿಶೇಷ.
8ನೇ ತರಗತಿ ಪಾಠಕ್ಕೆ ಸರ್ಕಾರ ನೇಮಿಸಿದ್ದ ಪದವೀಧರ ತರಬೇತಿ ಪಡೆದ ಶಿಕ್ಷಕರು ವರ್ಗಾವಣೆಯಾಗಿ ಎರಡು ವರ್ಷ ಕಳೆದಿದೆ. ನಂತರ ಈ ಹುದ್ದೆ ಭರ್ತಿಯಾಗದ ಕಾರಣ ವಿದ್ಯಾರ್ಥಿಗಳೇ ಸ್ವತಃ ಅಭ್ಯಾಸ ಮಾಡಬೇಕಾದ ದುರಂತ ಎದುರಾಗಿದೆ.
ಇದೇ ಶಾಲೆಯಲ್ಲಿ ಡಿಇಡಿ ಅರ್ಹತೆ ಮೇಲೆ ಇಬ್ಬರು ಶಿಕ್ಷಕರು ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದು, ಇವರು ಬಿಇಡಿ ಪದವಿಯನ್ನೂ ಹೊಂದಿದ್ದಾರೆ. ಇವರು ತಮಗೆ ವಹಿಸಿದ ತರಗತಿಗಳ ಬೋಧನೆ ನಂತರ ಉಳಿದ ಸಮಯವನ್ನು 8ನೇ ತರಗತಿಗೆ ಮೀಸಲಿ ಡುತ್ತಿದ್ದಾರೆ. ಇದರಿಂದ ತಮಗೆ ಕಾಯಂ ಶಿಕ್ಷಕರಿಲ್ಲ ಎನ್ನುವ ಕೊರತೆಯನ್ನು ಸ್ವಲ್ಪ ನೀಗಿಸಿದ್ದಾರೆ ಎಂದು 8ನೇ ತರಗತಿ ವಿದ್ಯಾರ್ಥಿಗಳು ಹೇಳುತ್ತಾರೆ.
ಆದರೆ ಇಂಗ್ಲಿಷ್, ಗಣಿತ ವಿಷಯ ಬೋಧನೆಗೆ ಬಿಎಸ್ಸಿಬಿಎಡ್ ಆದ ಕಾಯಂ ಶಿಕ್ಷಕರ ಅವಶ್ಯಕತೆ ಇದೆ. 8ನೇ ತರಗತಿ ವಿದ್ಯಾರ್ಥಿಗಳು ಈ ಸಾಲಿನ ವಾರ್ಷಿಕ ಪರೀಕ್ಷೆಗಳು ಎದುರಿಸುವ ಮುನ್ನ ಪದವಿ ತರಬೇತಾದ ಶಿಕ್ಷಕರನ್ನು ನೇಮಕ ಮಾಡುವಂತೆ ಮಕ್ಕಳ ಪಾಲಕರು, ಪೋಷಕರು, ಎಸ್ಡಿಎಂಸಿ ಆಡಳಿತ ಮಂಡಳಿಯವರು ಡಿಡಿಪಿಐ ಅವರನ್ನು ಆಗ್ರಹಿಸಿದ್ದಾರೆ.
ಒಂದು ವೇಳೆ ಕಾಯಂ ಶಿಕ್ಷಕರು ಹೊಂದಾಣಿಕೆ ಯಾಗದಿದ್ದಲ್ಲಿ ಅಕ್ಕಪಕ್ಕದ ಹಳ್ಳಿಗಳ ಶಾಲೆಯ ಟಿಜಿಟಿ ಶಿಕ್ಷಕರನ್ನಾದರೂ ಅರೆಕಾಲಿಕವಾಗಿ ಬಂದು ಹೋಗಲು ಇಲ್ಲವೆ ನಿಯೋಜನೆಯನ್ನಾದರೂ ಮಾಡುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.