ಭದ್ರಾವತಿ: ಸರ್ಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿ ತನಕ ತಲುಪಬೇಕು, ಆಗ ಮಾತ್ರ ಸಂವಿಧಾನಬದ್ಧವಾಗಿ ಪ್ರತಿ ವ್ಯಕ್ತಿಗೆ ತನ್ನ ಪಾಲಿನ ಹಕ್ಕು ಸಿಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಹೇಳಿದರು.
ಇಲ್ಲಿನ ಅಕ್ಕಮಹಾದೇವಿ ಮಂದಿರದ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಹಿಂದುಳಿದ ಜಾತಿಗಳ ಒಕ್ಕೂಟ ಏರ್ಪಡಿಸಿದ್ದ ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಯೋಜನೆಗಳು ಸಂವಿಧಾನಬದ್ಧತೆ ಹೊಂದಿರಬೇಕು, ಅದು ನಿಖರವಾಗಿ ಅಂತಹ ವ್ಯಕ್ತಿಗಳಿಗೆ ತಲುಪುವ ಕೆಲಸ ನಡೆಯಬೇಕು. ಅದು ಬಿಟ್ಟು ಜನಸಂಖ್ಯೆ ಆಧಾರದ ಮೇಲೆ ಅವುಗಳ ವಿಂಗಡಣೆ ಸರಿಯಲ್ಲ ಎಂದರು. ಸುಧಾರಣೆ ಮಾಡಿ ತೋರಿದ ವ್ಯಕ್ತಿಗಳಲ್ಲಿ ದೇವರಾಜ ಅರಸು ಅವರ
ಪಾತ್ರ ಹಿರಿದು. ಅವರ ಹೊರತಾಗಿ ಇದನ್ನು ಯಾರು ಸಾಧಿಸಲು ಸಾಧ್ಯವಾಗಿಲ್ಲ ಎಂದು ಸ್ಮರಿಸಿದರು.
ತಾಲ್ಲೂಕು ಅಧ್ಯಕ್ಷ ಎಚ್.ಆರ್. ಲೋಕೇಶ್ವರರಾವ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ವಿ. ರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಎಂ.ಜೆ. ಅಪ್ಪಾಜಿ, ಎಸ್.ಬಿ. ಶಿವಾಜಿರಾವ್ ಸಿಂಧ್ಯಾ, ನಗರಸಭಾ ಸದಸ್ಯರಾದ ಆರ್. ಕರುಣಾಮೂರ್ತಿ, ವಿಶಾಲಾಕ್ಷಿ, ವಿದ್ಯಾ ರವೀಶ್, ನಟರಾಜ್, ಮಾಜಿ ಸದಸ್ಯರಾದ ಆರ್. ವೇಣುಗೋಪಾಲ್, ಕರಿಯಪ್ಪ, ಟಿ. ವೆಂಕಟೇಶ್ ಉಪಸ್ಥಿತರಿದ್ದರು.
ಸೌಮ್ಯಾ, ಯಾಮಿನಿ ಪ್ರಾರ್ಥಿಸಿದರು, ವಿಶ್ವನಾಥರಾವ್ ನಿರೂಪಿಸಿದರು, ಡಿ.ಎನ್. ತ್ಯಾಗರಾಜ್ ಸ್ವಾಗತಿಸಿದರು, ಟಿ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.