ಚಾಮರಾಜನಗರ: `ಆಧಾರ್~ ಗುರುತಿನ ಚೀಟಿಯಿಂದ ಸಾಮಾಜಿಕ ಯೋಜನೆಗಳ ಸವಲತ್ತಿನ ದುರ್ಬಳಕೆ ತಡೆಗಟ್ಟಲು ಸಾಧ್ಯ ಎಂದು ರಾಜ್ಯ ಇ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಿ.ಎಸ್. ರವೀಂದ್ರನ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಬುಧವಾರ `ಆಧಾರ್~ ಗುರುತಿನ ಚೀಟಿ ನೋಂದಣಿ ಮತ್ತು ವಿತರಣೆ ಸಂಬಂಧ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಆಧಾರ್ ಚೀಟಿ ಬಳಸಬಹುದು. ಇದರಿಂದ ಸರ್ಕಾರದ ಸಾಮಾಜಿಕ ಯೋಜನೆಗಳ ಸವಲತ್ತು ಅನರ್ಹರ ಪಾಲಾಗುವುದು ತಪ್ಪುತ್ತದೆ. ನಕಲಿ ಪ್ರಮಾಣ ಪತ್ರದ ಹಾವಳಿಗೆ ಕಡಿ ವಾಣ ಹಾಕಬ ಹುದು ಎಂದರು.
ಆಧಾರ್ ಕಾರ್ಡ್ ನೋಂದಣಿ ಕಾರ್ಯಕ್ರಮದ ಅನುಷ್ಠಾನ ಕುರಿತು ಅಧಿಕಾರಿಗಳು ಹೆಚ್ಚಿನ ತಿಳಿವಳಿಕೆ ಹೊಂದಬೇಕು. ಯಾವುದೇ, ಲೋಪದೋಷ ಇಲ್ಲದಂತೆ ನೋಂದಣಿ ಕಾರ್ಯ ಜರುಗಲು ಅಗತ್ಯವಿರುವ ಪೂರ್ವ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಶಾಸಕರು, ಸಂಸದರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗೆಜಿಟೆಡ್ ಅಧಿಕಾರಿಗಳು ಆಧಾರ್ ಕಾರ್ಡ್ ನೋಂದಣಿಗೆ ಬೇಕಾಗುವ ವಾಸಸ್ಥಳದ ದೃಢಿ ೀಕರಣ ಮಾಡುವ ಅಧಿಕಾರ ಹೊಂದಿರುತ್ತಾರೆ. ನೋಂದಣಿ ಸಂದರ್ಭದಲ್ಲಿ ಅನುಸರಿಸಬೇಕಾದ ಇತರೇ ಕ್ರಮದ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಈಗಾಗಲೇ, ಆಧಾರ್ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಜಿಲ್ಲೆಯಲ್ಲಿ 6 ತಿಂಗಳೊಳಗೆ ನೋಂದಣಿ ಹಾಗೂ ವಿತರಣೆ ಕಾರ್ಯ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಸರ್ಕಾರದ ಈ ಮಹತ್ವಪೂರ್ಣವಾದ ಕಾರ್ಯಕ್ರಮ ನಿಗದಿತ ಅವಧಿಯೊಳಗೆ ಫಲಪ್ರದವಾಗಲು ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚಿನ ಶ್ರಮವಹಿಸಬೇಕು ಎಂದು ಕೋರಿದರು.
ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಕೆ. ಅಮರನಾರಾಯಣ, ಆಧಾರ್ ಯೋಜನೆಯ ನಿರ್ದೇಶಕ ಟಿ.ಪಿ. ಪ್ರಭಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ. ಸುಂದರನಾಯ್ಕ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಟಿ. ಚಂದ್ರ ಶೇಖರ್ ಹಾಜರಿದ್ದರು.