ಬೆಂಗಳೂರು: ಒಡಿಶಾ ವಿರುದ್ಧದ ಪಂದ್ಯದಲ್ಲಿ ಹಲವು ಕ್ಯಾಚ್ಗಳನ್ನು ಕೈಚೆಲ್ಲಿ ಭಾರೀ ಬೆಲೆ ತೆತ್ತಿರುವ ಕರ್ನಾಟಕ ತಂಡ ಈ ತಪ್ಪು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಶುಕ್ರವಾರದ ಅಭ್ಯಾಸದ ವೇಳೆ ಪೊರಕೆಯ ಮೊರೆ ಹೋಯಿತು.
ಕರ್ನಾಟಕ ತಂಡ ಬರೋಡ ವಿರುದ್ಧದ ಪಂದ್ಯಕ್ಕೂ ಇದೇ ರೀತಿಯ ಅಭ್ಯಾಸ ನಡೆಸಿತ್ತು. ಸ್ಲಿಪ್ನಲ್ಲಿಯೇ ಹೆಚ್ಚಾಗಿ ಬರುವ ಕ್ಯಾಚ್ಗಳು ಕೈಚೆಲ್ಲಿ ಹೋಗಬಾರದು ಎನ್ನುವ ಕಾರಣಕ್ಕೆ ಬ್ಯಾಟಿಂಗ್ ತರಬೇತುದಾರ ಅರುಣ್ ಕುಮಾರ್ ಈ ಪ್ರಯೋಗ ನಡೆಸಿದರು. ಸ್ಪಿನ್ನರ್ ಖಾಜಾ ಮೊಯಿನುದ್ದೀನ್ ಬೌಲಿಂಗ್ ಮಾಡಿದರೆ, ವಿಕೆಟ್ ಕೀಪರ್ ಸಿ.ಎಂ. ಗೌತಮ್, ಸ್ಲಿಪ್ನಲ್ಲಿ ಮನೀಷ್ ಪಾಂಡೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ಗೆಲುವಿನ ಆಸೆ: `ಹಿಂದಿನ ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿರಬಹುದು. ಆದರೆ, ಐದು ಬೆರಳು ಸಮವಾಗಿರುವುದಿಲ್ಲವಲ್ಲಾ. ಈ ಸಲ ನಮಗೇಕೆ ಒಲಿಯುವುದಿಲ್ಲ ಗೆಲುವು' ಎನ್ನುವ ಪ್ರಶ್ನೆಯನ್ನು ಮಾಧ್ಯಮದವರ ಮುಂದೆ ಇಟ್ಟ ಕರ್ನಾಟಕ ತಂಡದ ನಾಯಕ ವಿನಯ್, `ಸೋಲಿನಿಂದ ಗೆಲುವಿನೆಡೆಗೆ ಸಾಗಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ ಸಲ ಜಯ ನಮ್ಮದೇ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಮಾತಿಗೆ ಧ್ವನಿಗೂಡಿಸಿದ ಅರುಣ್, `ಆಟಗಾರರು ಖುಷಿಯಿಂದ ಆಡಬೇಕು. ಕಷ್ಟದ ಸಂಭ್ರಮದಲ್ಲೂ ಒತ್ತಡಕ್ಕೆ ಒಳಗಾಗಬಾರದು' ಎಂದು ಹೇಳಿದರು. `ಹಿಂದಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಸೋಲು ಕಂಡ ಕಾರಣ ಈ ಪಂದ್ಯದಲ್ಲಿ ನಮಗೆ ಗೆಲುವು ಅಗತ್ಯವಿದೆ' ಎಂದು ದೆಹಲಿ ತಂಡದ ನಾಯಕ ಶಿಖರ್ ಧವನ್ ನುಡಿದರು.