ಇಸ್ಲಾಮಾಬಾದ್ (ಐಎಎನ್ಎಸ್): ಕೊಲೆ ಆರೋಪದ ಮೇರೆಗೆ 1992ರಿಂದ ಭಾರತದ ಜೈಲಿನಲ್ಲಿದ್ದ ಪಾಕಿಸ್ತಾನ ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ ಮೊಹಮದ್ ಖಲೀಲ್ ಚಿಸ್ತಿ ಬುಧವಾರ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರು ಕಳುಹಿಸಿದ್ದ ವಿಶೇಷ ವಿಮಾನದಲ್ಲಿ ಮಂಗಳವಾರ ಸ್ವದೇಶಕ್ಕೆ ವಾಪಸಾದರು.
ಸ್ವರಾಷ್ಟ್ರಕ್ಕೆ ಇಳಿದ ನಂತರ ಪ್ರತಿಕ್ರಿಯೆ ನೀಡಿದ ಚಿಸ್ತಿ ಅವರು `ನಾನು ಮತ್ತೆ ಸ್ವದೇಶಕ್ಕೆ ವಾಪಸ್ ಆಗುವೆ ಎಂಬ ನಂಬಿಕೆ ಇರಲಿಲ್ಲ, ಎಲ್ಲ ದೇವರ ಕೃಪೆ~ ಎಂದು ಹೇಳಿದರು.
ವಿವಾದ ಸೃಷ್ಟಿಸಿದ ಚಿಸ್ತಿ ಹೇಳಿಕೆ
ಅಜ್ಮೇರ್ (ಪಿಟಿಐ): ಸುಪ್ರೀಂಕೋರ್ಟ್ ನೀಡಿರುವ ಅನುಮತಿ ಮೇರೆಗೆ ಪಾಕಿಸ್ತಾನದ ಸೂಕ್ಷ್ಮಾಣುಜೀವಿ ಶಾಸ್ತ್ರಜ್ಞ ಖಲೀಲ್ ಚಿಸ್ತಿ ಈಗ ತಾತ್ಕಾಲಿಕ ಅವಧಿಗೆ ಸ್ವದೇಶಕ್ಕೆ ಹೋಗಿರಬಹುದು. ಆದರೆ ಹೋಗುತ್ತಲೇ ಇಲ್ಲಿನ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹೇಳಿಕೆ ನೀಡಿ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.
ಇಪ್ಪತ್ತು ವರ್ಷಗಳ ಕಾಲ ರಾಜಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದ ಚಿಸ್ತಿ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.
`ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅನಕ್ಷರಸ್ಥರು ಇದ್ದಾರೆ. ಜೊತೆಗೆ ಬುದ್ಧಿವಂತ ನ್ಯಾಯಾಧೀಶರೂ ಇದ್ದಾರೆ~ ಎಂದು ಚಿಸ್ತಿ ಹೇಳಿಕೆ ನೀಡಿರುವುದಾಗಿ ಹೇಳಲಾಗಿದೆ.
ನ್ಯಾಯವಾದಿಗಳಾದ ದೇವೇಂದ್ರ ಸಿಂಗ್ ಶೆಖಾವತ್ ಮತ್ತು ಪ್ರಕಾಶ್ ಮೀನಾ ಇಲ್ಲಿನ ತ್ವರಿತಗತಿ ನ್ಯಾಯಾಲಯದಲ್ಲಿ ಚಿಸ್ತಿ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಮೇ 28ರಂದು ನಡೆಸಲಿದೆ.
ಭಾರತದ ನ್ಯಾಯಾಂಗದಲ್ಲಿ ಅನಕ್ಷರಸ್ಥರು ಇದ್ದಾರೆ. ಜೊತೆಗೆ ಬುದ್ಧಿವಂತ ನ್ಯಾಯಾಧೀಶರೂ ಇದ್ದಾರೆ. ಬುದ್ಧಿವಂತ ನ್ಯಾಯಾಧೀಶರು ಸುಪ್ರೀಂಕೋರ್ಟ್ವರೆಗೆ ತಲುಪಿದ್ದಾರೆ ಎಂದು ಟಿವಿ ಸಂದರ್ಶನವೊಂದರಲ್ಲಿ ಚಿಸ್ತಿ ಹೇಳಿರುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿದೆ.
ವಿವಾದ ಭುಗಿಲೇಳುತ್ತಲೇ ಸ್ಪಷ್ಟನೆ ನೀಡಿರುವ ಚಿಸ್ತಿ, ನ್ಯಾಯಾಂಗಕ್ಕೆ ಅಗೌರವ ತರುವ ಉದ್ದೇಶದಿಂದ ಆ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.